ಮೆಟ್ರೋ ಇಂಜಿನಿಯರ್ ಅಪಹರಣ,ಪೊಲೀಸರಿಂದ ರಕ್ಷಣೆ
ನಗರದ ಮಹತ್ವದ ಸಾರಿಗೆ ವ್ಯವಸ್ಥೆಯಾಗಿರುವ ನಮ್ಮ ಮೆಟ್ರೋದ ಇಂಜಿನಿಯರ್ ಒಬ್ಬರನ್ನು ಬುಧವಾರ ರಾತ್ರಿ ಅಪಹರಿಸಲಾಗಿದೆ. ನಾಲ್ವರು ದುಷ್ಕರ್ಮಿಗಳಿಂದ ಈ ಕುಕೃತ್ಯ ನಡೆದಿದೆ. ಇಂಡಿಕಾ ಕಾರಿನಲ್ಲಿ ಇಂಜಿನಿಯರನನ್ನು ಅಪಹರಿಸಿದ್ದ ದುಷ್ಕರ್ಮಿಗಳು ಅವರನ್ನು ಮೇಲುಕೋಟೆಯತ್ತ ಕರೆದೊಯ್ಯುತ್ತಿದ್ದರು.
ಆದರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಈ ಅಪಹರಣ ಪ್ರಕರಣವನ್ನು ಬೇಧಿಸಿದ್ದು, ಮೆಟ್ರೋ ಇಂಜಿನಿಯರರನ್ನು ಅಪಾಯದಿಂದ ಪಾರುಮಾಡಿದ್ದಾರೆ. ಏನಾಯಿತೆಂದರೆ ಮೇಲುಕೋಟೆ ಮಾರ್ಗ ಮಧ್ಯೆ ಪೊಲೀಸರು ನಾಕಾಬಂದಿ ನಡೆಸುತ್ತಿದ್ದರು. ಆಗ ಇಂಡಿಕಾ ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ. ಅನುಮಾನ ಬಂದು ಹೆಚ್ಚು ಪರಿಶೀಲನೆ ನಡೆಸಿದಾಗ ವ್ಯಕ್ತಿಯೊಬ್ಬರನ್ನು ಆ ಕಾರಿನಲ್ಲಿ ಅಪಹರಣ ಮಾಡುತ್ತಿರುವುದು ಅರಿವಿಗೆ ಬಂದಿದೆ.
ಈ ಮಧ್ಯೆ ನಾಲ್ವರ ಪೈಕಿ ಮೂವರು ಅಪಹರಣಕಾರರು ಕತ್ತಲಲ್ಲಿ ಪರಾರಿಯಾಗಿದ್ದಾರೆ. ಆದರೆ ಪೊಲೀಸರು ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಹರಣಕ್ಕೊಳಗಾಗಿದ್ದ ಮೆಟ್ರೋದ ಇಂಜಿನಿಯರ್ ಈಗ ಸುರಕ್ಷಿತವಾಗಿ ಪೊಲೀಸರ ವಶದಲ್ಲಿದ್ದಾರೆ. ಅಪಹರಣದ ಉದ್ದೇಶ ತಿಳಿದುಬಂದಿಲ್ಲ. ಹೆಚ್ಚಿನ ವಿವರಕ್ಕಾಗಿ ಕಾಯಲಾಗುತ್ತಿದೆ.