ಗಡ್ಕರಿ ಮನೆಯಿಂದ ಮಠಕ್ಕೆ ಹೋದ ಯಡಿಯೂರಪ್ಪ

ಬಿಜೆಪಿ ಹೈಕಮಾಂಡ್ ಗೆ ಎಲ್ಲವೂ ತಿಳಿದಿದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಪ್ರಕಟಿಸಲಿದ್ದಾರೆ. ಲೋಕಾಯುಕ್ತ ವರದಿ ಪ್ರಕಾರ ನನ್ನ ಮೇಲಿದ್ದ ಆರೋಪಗಳಿಂದ ಮುಕ್ತನಾಗಿದ್ದೇನೆ. ಹೈಕೋರ್ಟ್ ಆದೇಶ ನೀಡಿದೆ. ಕೊಟ್ಟ ಮಾತಿನಂತೆ ಹೈಕಮಾಂಡ್ ನಡೆದುಕೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಏ.1ರೊಳಗೆ ಸಿಹಿಸುದ್ದಿ ನಿರೀಕ್ಷೆಯಲ್ಲಿರುವ ಯಡಿಯೂರಪ್ಪ ಬಣ, ಗಡ್ಕರಿ ನಿವಾಸವನ್ನು ತೊರೆದು ದೇಗುಲಗಳನ್ನು ಸುತ್ತುತ್ತಿದೆ. ಮಾ.23ರಂದು ಯಡಿಯೂರಪ್ಪ ಅವರು ಪಕ್ಷದ ಹಿರಿಜೀವ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಲಿದ್ದು, ಯಡಿಯೂರಪ್ಪ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಬಗ್ಗೆ ನಾಳೆ ನಿರ್ಧಾರವಾಗಲಿದೆ.
ಇದಕ್ಕೂ ಮುನ್ನ ಬೆಳಗ್ಗಿನಿಂದಲೂ ಸೌತ್ ಅವಿನ್ಯೂ ರಸ್ತೆಯಲ್ಲಿರುವ ಸಂಸದ ಬಿವೈ ರಾಘವೇಂದ್ರ ಅವರ ಮನೆಯಲ್ಲಿ ಯಡಿಯೂರಪ್ಪ ಆಪ್ತರು ಮಾತು ಕತೆ ನಡೆಸಿದ್ದರು. ಲೆಹರ್ ಸಿಂಗ್, ಸಿಎಂ ಉದಾಸಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಜೊತೆ ಜೊತೆಗೆ ಸಾಗುತ್ತಿದ್ದಾರೆ.
ರಾಜೀನಾಮೆಗೆ ಸೂಚನೆ?: ಈ ನಡುವೆ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಗಡ್ಕರಿ ಕಡೆಯಿಂದ ಮತ್ತೆ ಬುಲಾವ್ ಬಂದಿದೆ. ಈ ಸುದ್ದಿ ಸಿಕ್ಕ ತಕ್ಷಣ, ಸದಾನಂದ ಗೌಡರಿಗೆ ರಾಜೀನಾಮೆ ನೀಡಲು ಗಡ್ಕರಿ ಸೂಚಿಸುತ್ತಾರೆ ಅದಕ್ಕೆ ಅವರಿಗೆ ಮತ್ತೆ ಕರೆಸಿಕೊಂಡಿದ್ದಾರೆ ಎಂದು ದೆಹಲಿ ಮಾಧ್ಯಮಗಳು ಸುದ್ದಿ ಬಿತ್ತರಿಸತೊಡಗಿದೆ.
ಇದರ ಜೊತೆಗೆ ಮೊದಲ ಬಾರಿಗೆ ಗೃಹ ಸಚಿವ ಆರ್ ಅಶೋಕ್ ಅವರು ಕೂಡಾ ದೆಹಲಿಯಲ್ಲಿ ಗಡ್ಕರಿ ಜೊತೆ ಡಿನ್ನರ್ ಟಾಕ್ ಮಾಡಲು ಹೋಗುತ್ತಿದ್ದಾರೆ. ಡಿವಿಎಸ್ ಹಾಗೂ ಬಿಎಸ್ ವೈ ಕದನದಲ್ಲಿ ಅಶೋಕ್ ಅವರಿಗೆ ಪಟ ನೀಡಿದರೂ ಅಚ್ಚರಿ ಏನಿಲ್ಲ ಎನ್ನಲಾಗುತ್ತಿದೆ.
ವಿಮಾನ ಏರಲು ಸಿದ್ಧರಾಗಿದ್ದ ಸದಾ ಬೆಂಬಲಿತ ಬಾಲಚಂದ್ರ ಜಾರಕಿಹೊಳಿ ಬಂಡಾಯ ಪಡೆ ಬೆಂಗಳೂರಿನಲ್ಲೇ ಉಳಿದಿದೆ. ಗಡ್ಕರಿ ರಾತ್ರಿ ವೇಳೆಗೆ ಏನು ಸುದ್ದಿ ನೀಡುತ್ತಾರೋ ಕಾದು ನೋಡಬೇಕಿದೆ.












Click it and Unblock the Notifications