ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು-ಗುಪ್ತವರದಿ
ರಾಜ್ಯ ಗುಪ್ತದಳ ಇಲಾಖೆಗೆ ತಲುಪಿರುವ ವರದಿಗಳ ಪ್ರಕಾರ ಬಿಜೆಪಿ ಗೆಲವು ಸಾಧಿಸಿದರೂ ಗೆಲುವಿನ ಅಂತರ ಕಡಿಮೆ ಇರುತ್ತದೆ. ಅಬ್ಬಬ್ಬಾ ಎಂದರೆ ಭಾಜಪ ಅಭ್ಯರ್ಥಿ ಸುನಿಲ್ ಕುಮಾರ್ 15-18 ಸಾವಿರ ಮತಗಳ ಅಂತರದಿಂದ ಗೆಲ್ಲಬಹುದು.
ಗುಪ್ತಚರ ವರದಿಗಳು ಹೀಗಿದ್ದರೂ ಕೂಡ ಬಿಜೆಪಿಗೆ ತಳಮಳ ಇದ್ದೇಇದೆ. ವಿಧಾನಸಭೆಯಲ್ಲಿ ಮೂವರು ಸಚಿವರು ನೀಲಿ ಚಿತ್ರ ನೋಡಿದ ಪ್ರಕರಣದಿಂದಾಗಿ ಮಹಿಳಾ ಮತದಾರರ ಕೋಪವನ್ನು ಬಿಜೆಪಿ ಎದುರಿಸಬೇಕಾಗತ್ತೆ ಎಂಬ ಭಯ ಪಕ್ಷವನ್ನು ಕಾಡುತ್ತಿದೆ.
ಅಲ್ಲದೆ, ಬಿ ಎಸ್ ಯಡಿಯೂರಪ್ಪ ಅವರು ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಪರವಾಗಿ ಚುನಾವಣಾ ಪ್ರಚಾರ ಮಾಡಲಿಲ್ಲ. ಇದರ ಜತೆಗೆ ಯಡಿಯೂರಪ್ಪ ನಿಷ್ಠ ವೀರಶೈವ ಮತದಾರರಿಗೂ ಕೋಪ ಇರುವುದರಿಂದ ಫಲಿತಾಂಶ ಇದಂಮಿತ್ಥಂ ಎಂದು ಹೇಳಕ್ಕಾಗುವುದಿಲ್ಲ.
ಸದಾನಂದ ಗೌಡರಿಗೆ ಮುಖ್ಯಮಂತ್ರಿ ಕುರ್ಚಿ ಈಗಲೋ ಆಗಲೋ ಎನ್ನುವಂತಾಗಿರುವ ಸನ್ನಿವೇಶದಲ್ಲಿ ಉಪಚುನಾವಣೆಯ ಫಲಿತಾಂಶ ಕುರಿತಾದ ಊಹಾಪೋಹಗಳು ಮತ್ತಷ್ಟು ಮಹತ್ವ ಪಡೆದುಕೊಂಡಿವೆ.
2009 ರಲ್ಲಿ ಗೌಡರು ಇಲ್ಲಿಂದ ಸ್ಪರ್ಧಿಸಿ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗಡೆ ವಿರುದ್ಧ 27 ಸಾವಿರ ಚಿಲ್ಲರೆ ಮತಗಳ ಅಂತರದಿಂದ ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆವಾಗ, ಜೆಡಿ ಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ.
ಈ ಮಧ್ಯೆ, ತಾವೇ ನಡೆಸಿದ ಸಮೀಕ್ಷೆ ಪ್ರಕಾರ ಜೆಡಿ ಎಸ್ ಅಭ್ಯರ್ಥಿ ಭೋಜೇಗೌಡರು ವಿಜಯಶಾಲಿ ಆಗಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.