Get Updates
Get notified of breaking news, exclusive insights, and must-see stories!

ಇಷ್ಟಕ್ಕೂ ಯಡಿಯೂರಪ್ಪ ಬಾಧೆ ಏನು?

karnataka-bjp-battle-bsy-vs-sadananda-gowda
ಬೆಂಗಳೂರು, ಮಾ.18: ಮುಖ್ಯಮಂತ್ರಿ ಖುರ್ಚಿಯಲ್ಲಿ ಸದಾನಂದಗೌಡರು ಮುಂದುವರಿಯುವುದನ್ನು ಸಹಿಸಲಾಗದೆ ಒಂಟಿಕಣ್ಣೀರು ಹಾಕುತ್ತಿರುವ (ಒಮ್ಮೆ ಎಡಚಿತ್ರ ನೋಡಿ) ಮಾಜಿ ಸಿಎಂ ಯಡಿಯೂರಪ್ಪ ಅವರು ನಿರ್ಣಾಯಕ ಹೋರಾಟಕ್ಕೆ ವೀಳ್ಯ ನೀಡಿದ್ದಾರೆ.

'ಇಲ್ಲ. ನಾನು ಯಾವುದೇ ಬೇಡಿಕೆ ಮಂಡಿಸಿ, ವರಿಷ್ಠರ ಮುಂದೆ ಮಂಡಿಯೂರುವುದಿಲ್ಲ' ಎನ್ನುತ್ತಲೇ ಶನಿವಾರ ಇದ್ದಕ್ಕಿದ್ದಂತೆ ಯಡಿಯೂರಪ್ಪನವರು ಎದ್ದು ಕುಳಿತಿದ್ದಾರೆ. ಇಲ್ಲಿ ಪ್ರಧಾನವಾಗಿ ಯಡಿಯೂರಪ್ಪನವರನ್ನು ಎರಡು ವಿಷಯಗಳು ಬಾಧಿಸುತ್ತಿರಬಹುದು. ಒಂದು - ಸಿಎಂ ಸದಾನಂದಗೌಡರು ಬಜೆಟ್ ಮಂಡಿಸುವುದಕ್ಕೆ ಬ್ರೇಕ್ ಹಾಕುವುದು ಮತ್ತು 2. ಉಡುಪಿ- ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯಲ್ಲಿ ಸದಾನಂದರಿಗೆ ಸೋಲುಣಿಸುವುದು.

ಎರಡರಲ್ಲೂ ಒಂದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ವಚನಭ್ರಷ್ಟನಾಗಿ ಸದಾನಂದ ತನಗೆ ಅಧಿಕಾರ ವಾಪಸ್ಸು ಮಾಡಲಿಲ್ಲವೆಂಬ ಕೊರಗಿನಿಂದ ತನ್ನದು ಒಂದು ಕಣ್ಣು ಹೋದರೂ ಪರವಾಗಿಲ್ಲ; ಸದಾನಂದದು ಎರಡೂ ಕಣ್ಣು ಹೋಗಲಿ ಎಂಬ ಎಣಿಕೆ.

ಇದೀಗ ತಾನೆ ಬಂದ ಸುದ್ದಿಯಂತೆ ಇಂದು ಯಡಿಯೂಪ್ಪ ಪಟಾಲಂಗೆ ಮತ್ತು ನಾಳೆ ಸದಾನಂದ ಗೌಡ ಹಾಗೂ ಈಶ್ವರಪ್ಪಗೆ ದಿಲ್ಲಿಗೆ ಬರಲು ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.

ಕುತೂಹಲದ ಸಂಗತಿಯೆಂದರೆ ಇವೆರಡೂ ಯಡಿಯೂರಪ್ಪಗೆ ಮುಖ್ಯವಾಗಿಯೇ ಇವೆ: ಮೊದಲನೆಯದು, ಸಿಎಂ ಸದಾನಂದಗೌಡರು ಬಜೆಟ್ ಮಂಡಿಸಬಾರದು- ಹೌದು. ಇಲ್ಲಿ ಯಡಿಯೂರಪ್ಪನವರ ಗುರಿ ಸ್ಪಷ್ಟವಾಗಿದೆ. ಅದು ಹೇಳಿ ಕೇಳಿ ಯಡಿಯೂರಪ್ಪನವರ ಮಹತ್ವಾಕಾಂಕ್ಷಿ ಬಜೆಟ್. ಅದಕ್ಕಾಗಿ ಕಳೆದ ವರ್ಷ ಸ್ವತಃ ಬಜೆಟ್ ಮಂಡಿಸಿದ ಘಳಿಗೆಯಿಂದಲೂ 'ಲಕ್ಷ ಕೋಟಿ' ಎಂದೇ ಜಪಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಆ ಭಾರಿ ಗಾತ್ರದ ಬಜೆಟ್ ಗೆ ಯಡಿಯೂರಪ್ಪ ಅಂಕಿತರಾಗಿದ್ದಾರೆ. ಅಂಥಹುದರಲ್ಲಿ ಅದಕ್ಕೆ ಸದಾನಂದ ಅಂಕಿತ ಹಾಕುವುದನ್ನು ಅವರು ತಾನೇ ಹೇಗೆ ಸಹಿಸಿಯಾರು?

ಹೀಗಾಗಿ, ಆ ಲಕ್ಷ ಕೋಟಿ ಬಜೆಟ್ ಬಗ್ಗೆ ಸದಾನಂದಗೌಡರಿಗೆ ಈಗಾಗಲೇ ಸಾಕುಬೇಕು ಅನಿಸಿದ್ದಾರೆ ಯಡಿಯೂರಪ್ಪ. ತಮ್ಮ ಬೆಂಬಲಿತ ಸಚಿವರು, ಅಧಿಕಾರಿಗಳಿಂದ ಬಜೆಟ್ ತಯಾರಿಕೆಗೆ ಎಷ್ಟು ಬೇಕೋ ಅಷ್ಟೂ ಅಡ್ಡಗಾಲು ಹಾಕಿಸಿದ್ದಾರೆ. ಸದಾದುಃಖಿತರಾಗಿ ಸದಾನಂದರು ಏಕಾಂಗಿಯಾಗಿಯೇ ಬಜೆಟ್ ಸಿದ್ಧಪಡಿಸಿದ್ದಾರೆ. ಆದರೆ ಇಂತಿಪ್ಪ ಬಜೆಟ್ ಹಾಗೂ ಸದಾನಂದರನ್ನು ಒಂದೇ ಏಟಿಗೆ ಬೀಳಿಸುವುದು ಯಡಿಯೂರಪ್ಪಗೆ ಅಷ್ಟು ಸುಲಭ ಸಾಧ್ಯವಿಲ್ಲ.

ಅಷ್ಟಕ್ಕೂ ಯಡಿಯೂರಪ್ಪ, ಸದಾನಂದ ಮತ್ತು ಅವರ ಬಜೆಟ್ ಅನ್ನು ನಿಷ್ಫಲಗೊಳಿಸಲೇಬೇಕು ಅಂತ ಹಠಕ್ಕೆ ಬಿದ್ದರೆ ವಿಧಾನಸಭೆ ವಿಸರ್ಜನೆಯೊಂದೇ ಉಳಿದಿರುವ ಹಾದಿ. ಏಕೆಂದರೆ ಈಗಾಗಲೇ ಮುಖ್ಯಮಂತ್ರಿ ಸದಾನಂದಗೌಡರ ಹೆಸರಿನಲ್ಲಿ ಬಜೆಟ್ ಅಧಿವೇಶನಕ್ಕೆ ಅಧಿಸೂಚನೆ ಬಿದ್ದಾಗಿದೆ. ಅದನ್ನಿನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೆಸರಿಗೆ ಬದಲಿಸಲಾಗದು. ಆದರೆ ವಿಧಾನಮಂಡಲದಲ್ಲಿ ಬಜೆಟ್ ಅನುಮೋದನೆಗೆ ಬಂದಾಗ ಯಡಿಯೂರಪ್ಪ ನಿಜಕ್ಕೂ ಆಟ ಆಡಬಹುದು. ಬಜೆಟ್ ಅನ್ನು ಅವರು ಬೀಳಿಸಬಹುದು. ಅರ್ಥಾತ್ ಸರಕಾರವನ್ನೇ ಉರುಳಿಸಬಹುದು. ಅದು ಸಾಧ್ಯಾವಾದೀತಾ? ಯಡಿಯೂರಪ್ಪ ಅಷ್ಟೊಂದು ಧೈರ್ಯ ತೋರುತ್ತಾರಾ? ಎಂಬುದು ಬೇರೆ ಮಾತು.

ಆದರೂ ಮುರುಘಾಮಠದ ಶರಣರು ಹೇಳಿದಂತೆ ಯಡಿಯೂರಪ್ಪ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ರಾಜ್ಯ ಬಿಜೆಪಿಯಲ್ಲಿ ಇನ್ನೂ ಅಷ್ಟರಮಟ್ಟಿಗೆ ಅವರ ಹಿಡಿತವಿದೆ. ಇದನ್ನು ಯಾರೂ ಅಲ್ಲಗಳೆಯಲಾರರು. ಮತ್ತು ಅದೇ ಈಗ ಎಲ್ಲ ಸಂಕಟಗಳಿಗೆ ಕಾರಣವಾಗಿರುವುದು. ಈ ಸಾಧ್ಯತೆಯನ್ನು ಮನಗಂಡೇ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪನವರು hint ಕೊಟ್ಟಿರುವುದು - ವಿಧಾನಸಭೆ ವಿಸರ್ಜನೆ ಎಂಬ ಅಂತಿಮ ಅಸ್ತ್ರ. ಅಲ್ಲಿಗೆ ಸಲ್ಲದ ಆರೋಪದೊಂದಿಗೆ ಜೈಲಿಗೆ ಅಟ್ಟಿ, ಅಧಿಕಾರವಂಚಿಸಿದರೆಂಬ ಒಂದಷ್ಟು 'ಅನುಕಂಪ' ದೊಂದಿಗೆ ಚುನಾವಣೆ ಎದುರಿಸುವ ಯಡಿಯೂರಪ್ಪನವರ ಇರಾದೆಯೂ ಈಡೇರೀತು? ಕಾದು ನೋಡುವ.

ಇನ್ನು, ಎರಡನೆಯ ಸಾಧ್ಯತೆ ಉಡುಪಿ- ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯಲ್ಲಿ ಸದಾನಂದರಿಗೆ ಸೋಲುಣಿಸುವುದು. ಅಲ್ಲಿಗೆ ತಾನಿಲ್ಲದೆ ಉಪಚುನಾವಣೆ ಗೆಲ್ಲುವುದು ಪಕ್ಷಕ್ಕೆ ಸಾಧ್ಯವಾಗದು ಎಂಬುದರ ಜತೆಜತೆಗೆ ಪಕ್ಷಕ್ಕೆ ಗೆಲುವು ದಕ್ಕಿಸಿಕೊಡಲು ಸದಾನಂದಗೌಡರು ವಿಫಲರಾದರು ಎಂಬ ಸಂದೇಶ ರವಾನಿಸುವುದು ಯಡಿಯೂರಪ್ಪನವರ ಉದ್ದೇಶ.

ಈ ನಿಟ್ಟಿನಲ್ಲಿ ಆರಂಭದಿಂದಲೂ ಶಕ್ತಿಮೀರಿ ಪ್ರಯತ್ನಿಸುತ್ತಿರುವ ಯಡಿಯೂರಪ್ಪ, ಕೊನೆ ಘಳಿಗೆಯಲ್ಲೂ ಅದನ್ನೇ ಮಾಡಿದ್ದಾರೆ. ಶನಿವಾರ ಇದ್ದಕ್ಕಿದ್ದಂತೆ ಅಂತಿಮ ಹೋರಾಟಕ್ಕೆ ವೀಳ್ಯ ನೀಡಿರುವುದು ಇದಕ್ಕೇ. ಅಂದರೆ ಸದಾನಂದರು ಹಾಗೂ ಬಿಜೆಪಿಗೆ ಈ ಉಪಚುನಾವಣೆಯಲ್ಲಿ ಗೆಲುವು ದಕ್ಕಿಸಬಾರದು ಎಂಬ ಸಂದೇಶವನ್ನು ಯಡಿಯೂರಪ್ಪ ಕರಾರುವಕ್ಕಾಗಿ ಮತದಾರರಿಗೆ ಕಳಿಸಿದ್ದಾರೆ. ಮತದಾರ ಪ್ರಭು ಯಡಿಯೂರಪ್ಪನವರ mind read ಮಾಡುತ್ತಾನಾ? ಯಡಿಯೂರಪ್ಪನವರ ತಂತ್ರ ಫಲಿಸುವುದಾ? ಇದಕ್ಕೆಲ್ಲ ಉತ್ತರ ಮಾರ್ಚ್ 21ರಂದು ದೊರೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+