ಉಪ ಚುನಾವಣೆ: ಶೇ.68ರಷ್ಟು ಮತದಾನ
2009ರಲ್ಲಿ ಈ ಕ್ಷೇತ್ರದಲ್ಲಿ ಶೇ 69.38 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ 68.14 ರಷ್ಟು ಮಾತ್ರ ಆಗಿದೆ. ನಕ್ಸಲ್ ಬಾಧಿತ 77 ಮತಗಟ್ಟೆಗಳಲ್ಲಿ ಹೆಚ್ಚಿನ ಮತದಾನ ನಡೆದಿರುವುದು ವಿಶೇಷ.
ಸಂಜೆ 5 ಗಂಟೆಗೆ ಮುಗಿಯಬೇಕಿದ್ದ ಮತದಾನ ಪ್ರಕ್ರಿಯೆ ರಾತ್ರಿವರೆಗೂ ನಡೆದಿದ್ದು ವಿಶೇಷ. ಸರದಿ ಸಾಲಿನಲ್ಲಿ ನಿಂತ ಎಲ್ಲರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತರೀಕೆರೆಯ ಅನೇಕ ಮತಗಟ್ಟೆಗಳಲ್ಲಿ ರಾತ್ರಿವರೆಗೂ ಮತದಾನ ಮಾಡುವ ಅವಕಾಶ ನೀಡಲಾಗಿತ್ತು.
4:00: ಮಧ್ಯಾಹ್ನದ ಉರಿ ಬಿಸಿಲಿನ ನಂತರ ಉತ್ಸಾಹದಿಂದ ಮತಗಟ್ಟೆಗಳತ್ತ ಬರುತ್ತಿದ್ದು, 4.00 ಗಂಟೆ ನಂತರ ಎರಡೂ ಜಿಲ್ಲೆಗಳಲ್ಲಿ ಸೇರಿ ಶೇ. 57 ರಷ್ಟು ಮತದಾನವಾಗಿದೆ. ಮತದಾನ ಅವಧಿ ಮುಕ್ತಾಯದ ಹೊತ್ತಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆಯುವ ನಿರೀಕ್ಷೆಯಿದೆ.
12:00: ಚಿಕ್ಕಮಗಳೂರು ಜಿಲ್ಲೆ ಶೇ.25 ರಷ್ಟು ಮತದಾನವಾಗಿದೆ. ಉಡುಪಿ ಜಿಲ್ಲೆಯಲ್ಲಿ ಶೇ.19 ರಷ್ಟು ಮಾತ್ರ ಮತದಾನವಾಗಿದ. ಒಟ್ಟಾರೆ ಶೇ. 20ರಷ್ಟಾಗಿದ್ದು, ಮಧ್ಯಾಹ್ನವಾದರೂ ಶೇ .25ರಷ್ಟು ಮತದಾನವಾಗಿರುವುದು ಅಭ್ಯರ್ಥಿಗಳಿಗೆ ಆತಂಕ ತಂದಿದೆ.
ಎರಡೂ ಜಿಲ್ಲೆ ಸೇರಿ ಒಟ್ಟು ಮತದಾರರು 12,45,266 ನಷ್ಟಿದ್ದಾರೆ. ಉಡುಪಿ(ಒಟ್ಟು)-6,26,876. ಚಿಕ್ಕಮಗಳೂರು(ಒಟ್ಟು)-6,18,390.
ಬೆಳಗ್ಗೆ 11: ಮತದಾನ ಪ್ರಕ್ರಿಯೆ ನಿಧಾನಗತಿಯಿಂದ ಸಾಗಿದ್ದು, ಶೇ. 14 ರಷ್ಟು ಮಾತ್ರ ಮತದಾನವಾಗಿರುವ ಸುದ್ದಿ ಬಂದಿದೆ. 10.00 ಗಂಟೆ ಸುಮಾರಿಗೆ ಉಡುಪಿ ಜಿಲ್ಲೆಯಲ್ಲಿ ಶೇ.6 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.4 ರಷ್ಟು ಮಾತ್ರ ಮತದಾನವಾಗಿತ್ತು.
ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸಲಿರುವ ಉಡುಪಿ ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ಕಂಡು ಬಂದಿದ್ದಾರೆ.
ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಈವರೆಗಿನ ಸುದ್ದಿ ಪ್ರಕಾರ ಮತದಾನ ಪ್ರಕ್ರಿಯೆ ನಿಧಾನಗತಿಯಿಂದ ಸಾಗಿದೆ. ಆದರೆ, ಎರಡೂ ಜಿಲ್ಲೆ ಸೇರಿ ಶೇ.60ಕ್ಕೂ ಹೆಚ್ಚು ಮತದಾನ ನಡೆಯುವ ಸಾಧ್ಯತೆಯಿದೆ ಎಂದು ನಮ್ಮ ಬಾತ್ಮಿದಾರರು ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಕೊರ್ಗಿ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.
ಕಾರ್ಕಳದ ಪೆರ್ವಾಜೆ ಶಾಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರು ಪತ್ನಿ ಪ್ರಿಯಾಂಕಾ ಸಮೇತರಾಗಿ ಆಗಮಿಸಿ, ಮತದಾನ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಭೋಜೇಗೌಡ ಅವರು ಹೊಸಮನೆ ಬಡಾವಣೆಯ ತಮ್ಮ ನಿವಾಸದಲ್ಲಿ ಗೋಪೂಜೆ ಮುಗಿಸಿ ನಂತರ 199ನೇ ಮತಗಟ್ಟೆಗೆ ತೆರಳಿ ಪತ್ನಿ ಅಚಲ ಜೊತೆ ತೆರಳಿ ಮತ ಚಲಾಯಿಸಿದ್ದಾರೆ.
ಇನ್ನು ಪತ್ನಿ ಪಲ್ಲವಿ ಜೊತೆ 149ನೇ ಮತಗಟ್ಟೆಗೆ ಆಗಮಿಸಿದ ಬಿಜೆಪಿ ನಾಯಕ ಸಿಟಿ ರವಿ ಅವರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.