ಶಿಕ್ಷಕರು ಶಿಕ್ಷಿಸುವುದು, ಶಿಕ್ಷಕರನ್ನೇ ಥಳಿಸುವುದು ಎಷ್ಟು ಸರಿ?
ಇಂದಿನ ದಿನಗಳಲ್ಲಿ ಮಕ್ಕಳ ಮೇಲೆ ಶಿಕ್ಷಕರು ಕೈಯೆತ್ತುವುದು ಕೂಡ ಅಪರಾಧವಾಗಿದೆ. ಹಿಂದಿನ ದಿನಗಳಲ್ಲಿ ತುಂಟ ಮಕ್ಕಳನ್ನು ಶಿಕ್ಷರು ಸರಿದಾರಿಗೆ ತರಲು ಶಿಕ್ಷಿಸುವುದು ಸರ್ವೇಸಾಮಾನ್ಯವಾಗಿತ್ತು. ಎಲ್ಲರೂ ಗುರುಗಳನ್ನು ದೇವರಂತೆ ಕಾಣುತ್ತಿದ್ದರು. ದಾರಿತಪ್ಪಿದ ಮಕ್ಕಳನ್ನು ದಂಡಿಸಿದರೆ ಪಾಲಕರು ಚಕಾರವೆತ್ತುತ್ತಿರಲಿಲ್ಲ. ಆದರೆ, ಕಾಲ ಹಿಂದಿನಂತಿಲ್ಲ. ಮಕ್ಕಳನ್ನು ದಂಡಿಸದೆಯೇ ಸರಿದಾರಿಗೆ ತರಬೇಕೇ ಹೊರತು ದೈಹಿಕವಾಗಿ ಶಿಕ್ಷಿಸುವಂತಿಲ್ಲ.
ಅನೇಕ ಶಾಲೆಗಳಲ್ಲಿ ಪ್ರತಿಯೊಂದ ಚಲನವಲನ, ಮಕ್ಕಳ ಸ್ವಭಾವ, ನಡವಳಿಕೆ ಬಗ್ಗೆ ದಾಖಲೆಗಳನ್ನು ಶಿಕ್ಷಕರು ಬರೆದಿಡುತ್ತಾರೆ. ತಿಂಗಳಲ್ಲಿ ಒಂದು ದಿನ ಪಾಲಕರನ್ನು ಕರೆಸಿ ಮಾತನಾಡುತ್ತಾರೆ. ಮಕ್ಕಳು ದಾರಿತಪ್ಪಿದರೆ ಪಾಲಕರನ್ನು ಯಾವುದೇ ಸಂದರ್ಭದಲ್ಲಿ ಕರೆಸಿ ಸರಿದಾರಿಗೆ ತರಲು ಅವಕಾಶವಿದೆ. ಮಕ್ಕಳನ್ನು ಹೀನಾಯವಾಗಿ ಶಿಕ್ಷಿಸುವುದು ದೂರವೇ ಉಳಿಯಿತು. ಕೆಲ ದಿನಗಳ ಹಿಂದೆ, ಸರಿದಾರಿಗೆ ತರಲೆತ್ನಿಸಿದ ಶಿಕ್ಷಕಿಯನ್ನೇ ವಿದ್ಯಾರ್ಥಿಯೊಬ್ಬ ಚೂರಿ ಇರಿದು ಕೊಂದಿದ್ದ.
ಇನ್ನು ಮಕ್ಕಳನ್ನು ಶಿಕ್ಷಿಸಿದರೆ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಬಾರುಕೋಲು ಕೈಯಲ್ಲಿ ಹಿಡಿದೇ ನಿಂತಿರುತ್ತಾರೆ. ಆದರೆ, ಪಾಲಕರು ಅಥವಾ ಸಾರ್ವಜನಿಕರು ಶಿಕ್ಷರನ್ನೇ ಶಿಕ್ಷಿಸುವುದು ಎಷ್ಟು ಸರಿ. ಮೇಲಧಿಕಾರಿಗಳಿರುವುದಿಲ್ಲವೆ, ಮಾನವ ಹಕ್ಕು ಆಯೋಗವಿಲ್ಲವೆ ಅಥವಾ ಪೊಲೀಸರಿಲ್ಲವೆ? ಪಾಲಕರು ಕೂಡ ಶಾಂತಿ ಕಳೆದುಕೊಳ್ಳದೆ ವಿವೇಚನೆಯಿಂದ ವರ್ತಿಸುವ ಅಗತ್ಯವಿದೆ.
ಶಿಕ್ಷಕರ ಮೇಲೆಯೇ ಸಾರ್ವಜನಿಕರು ಕೈಮಾಡುವುದು ಒಂದೆಡೆಯಾದರೆ, ಕಳ್ಳರು, ಚೀಟಿ ಬಿಸಿನೆಸ್ನಲ್ಲಿ ಮೋಸ ಮಾಡಿದವ, ಅನೈತಿಕ ಸಂಬಂಧದಲ್ಲಿ ಸಿಕ್ಕಿಬಿದ್ದವರು ಸಿಕ್ಕಿಬಿದ್ದಾಗ, ಪೊಲೀಸರಿಗೆ ತಿಳಿಸುವ ಮೊದಲೇ ಆರೋಪಿಗಳನ್ನು ಕಂಬಕ್ಕೆ ಕಟ್ಟಿ ಥಳಿಸುವುದು ಸಾಮಾನ್ಯವಾಗುತ್ತಿದೆ. ಟಿವಿ ಕ್ಯಾಮೆರೆ ಇದ್ದರಂತೂ ಇಂಥವರ ಆಟಾಟೋಪ ಮಿತಿಮೀರಿರುತ್ತದೆ. ಇದು ಎಷ್ಟು ಸರಿ?