ಕೇಂದ್ರ ಬಜೆಟ್ : ಸಂಬಳದಾರರಿಗೆ ಪ್ರಣಬ್ ಲಕ್ಷ್ಮೀಕಟಾಕ್ಷ?
ಸಂಸತ್ ಸ್ಥಾಯಿ ಸಮಿತಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಏರಿಸಬೇಕೆಂದು ಶಿಫಾರಸು ಮಾಡಿತ್ತು. ಆದರೆ, ದೇಶ ತೀವ್ರ ಹಣಕಾಸಿನ ಕೊರತೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಈ ಶಿಫಾರಸನ್ನು ವಿತ್ತ ಸಚಿವರು ಯಥಾವತ್ ಅಂಗೀಕರಿಸಲಾರರು.
ಜನಪ್ರಿಯತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ದೇಶದ ಹಣಕಾಸು ಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಅನೇಕ ಕಠಿಣ ಕ್ರಮಗಳನ್ನು ಪ್ರಣಬ್ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಪ್ಪು ಹಣವನ್ನು ಪೇರಿಸುತ್ತಿರುವವರು ಮತ್ತು ತೆರಿಗೆ ಕಟ್ಟದೆ ನುಣುಚಿಕೊಳ್ಳುತ್ತಿರುವವರ ಮೇಲೆ ಪ್ರಣಬ್ ಚಾಟಿ ಏಟು ಬೀಸಲಿದ್ದಾರೆ.
ಕಾರು ಕೊಳ್ಳುವವರಿಗೆ ಈ ಬಜೆಟ್ ಬೆಲ್ಲಕ್ಕಿಂತ ಬೇವನ್ನು ನೀಡಲಿದೆ. ಐಷಾರಾಮಿ ಕಾರುಗಳ ಮೇಲಿನ ಕರವನ್ನು ಪ್ರಣಬ್ ಹೆಚ್ಚಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಜಾರುಬಂಡೆಯಾಡುತ್ತಿರುವ ಆರ್ಥಿಕ ಬೆಳವಣಿಗೆಯನ್ನು ಹದ್ದುಬಸ್ತಿನಲ್ಲಿಡುವುದು ಪ್ರಣಬ್ ಅವರಿಗೆ ನಿಜಕ್ಕೂ ಸವಾಲಿನ ಕೆಲಸವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾ ತೈಲದ ಬೆಲೆ, ತಲೆಬಿಸಿಯಾಗಿರುವ ಹಣದುಬ್ಬರ ವಿತ್ತ ಸಚಿವರ ಕೈಗಳನ್ನು ಕಟ್ಟಿಹಾಕಿವೆ.
ಇದೆಲ್ಲದರ ಜೊತೆಗೆ, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿತ್ತ ಸಚಿವರು ಕೇಂದ್ರ ಬಜೆಟ್ ಮಂಡಿಸಲಿರುವುದು ನಿಶ್ಚಿತ. ಯಾವುದು ಅಗ್ಗವಾಗಲಿದೆ, ಯಾವುದು ತುಟ್ಟಿಯಾಗಲಿದೆ ಎಂಬುದರ ಮೇಲೆಯೂ ಶ್ರೀಸಾಮಾನ್ಯರು ಕಣ್ಣಿಟ್ಟಿದ್ದಾರೆ. ಕೇಂದ್ರ ಬಜೆಟ್ ನಂತರ ಕರ್ನಾಟಕ ಬಜೆಟ್ ಕೂಡ ಮಾ.21ರಂದು ಮಂಡನೆಯಾಗಲಿದೆ. ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಚೊಚ್ಚಲ ಬಜೆಟ್ಟನ್ನು ಮಂಡಿಸಲಿದ್ದಾರೆ.