ಬಿಜೆಪಿಯ ಸುನಿಲ್ ಕುಮಾರ್ ಜೆಡಿಎಸ್ ಕ್ಯಾಂಡಿಡೇಟಾ?
ಆದರೆ ಕ್ಷೇತ್ರದ ಮತದಾರನ ಮಾಹಿತಿಗಾಗಿ ಹೇಳುವುದಾದರೆ 'ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆಂಬ ದುರುದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿವೆ' ಎಂದು ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಇದಕ್ಕೆ ಅವರು ಕೊಡುವ ಪುರಾವೆ - ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಮತ್ತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ನಡುವೆ ಹಿಂದಿನಿಂದಲೂ ನಂಟಿದೆ. ಈಗಲೂ ಅದು ಮುಂದುವರಿದಿದ್ದು, ಚುನಾವಣೆಯಲ್ಲಿ ರಹಸ್ಯವಾಗಿ ಕೈಜೋಡಿಸಿಕೊಂಡಿದ್ದಾರೆ ಎಂಬುದು.
'ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಆಗ ಬೆಂಗಳೂರಿನ ಕೆಂಗೇರಿ ಹೋಬಳಿಯ ವಳಗೆರೆಹಳ್ಳಿಯ ಸರ್ವೆ ನಂಬರ್ 80/1 ಮತ್ತು 80/2ರಲ್ಲಿ ಹೇಮರಾಜು, ಗಂಗಾಧರ, ನಾರಾಯಣಸ್ವಾಮಿ ಮತ್ತಿತರರಿಗೆ ಸೇರಿದ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕುಮಾರಸ್ವಾಮಿ ಅವರಿಗೆ ಸುನಿಲ್ ಕುಮಾರ್ ಪತ್ರ ಬರೆದಿದ್ದರು.
ಅದನ್ನು ಶಿರಸಾವಹಿಸಿ ಪಾಲಿಸಿದ ಕುಮಾರಸ್ವಾಮಿ ಕಾನೂನು ಉಲ್ಲಂಘಿಸಿ ಈ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದರು ಎಂದು ಆರೋಪಿಸಿದ ಶಿವಕುಮಾರ್, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಬಿಡುಗಡೆ ಮಾಡಿದರು. ಇದಕ್ಕೆ ಕುಮಾರಣ್ಣ ಏನನ್ನುತ್ತಾರೆ?