ಮಾ.5: ರಾಜ್ಯದಲ್ಲಿ ಕೋರ್ಟ್ ಕಲಾಪ ಬಹಿಷ್ಕಾರ
ಶುಕ್ರವಾರ ಕೋರ್ಟ್ ಆವರಣದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ತಮ್ಮ ವಾದವನ್ನೂ ಆಲಿಸಬೇಕು. ವಿನಾಕಾರಣ ತಮ್ಮ ಮೇಲೆ ಆರೋಪ ಮಾಡಿರುವುದು ಸರಿಯಲ್ಲ. ಮೇಲಾಗಿ ಯಾರೋ ಕೆಲವು ವಕೀಲರು ನಡೆಸಿದ ಕೃತ್ಯಕ್ಕೆ ಇಡೀ ವಕೀಲ ಸಮುದಾಯವನ್ನೇ ಗೂಂಡಾಗಳು ಎಂಬರ್ಥದಲ್ಲಿ ಬಿಂಬಿಸುವುದು ಸರಿಯಲ್ಲ ಎಂಬ ಅಸಮಾಧಾನವನ್ನು ವಕೀಲರ ಸಂಘದ ಸದಸ್ಯರು ಹೊರಹಾಕಿದ್ದಾರೆ.
ಮಾಧ್ಯಮಗಳ ವಿರುದ್ಧ ಮಾನಹಾನಿ ಮೊಕದ್ದಮೆ: ವಕೀಲರ ವಿರುದ್ಧ ಅವಮಾನಕರವಾಗಿ ಸುದ್ದಿ ಬಿತ್ತರಿಸುತ್ತಿರುವ ಮಾಧ್ಯಮಗಳ ವಿರುದ್ಧ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ವಕೀಲರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ಹೇಳಿದ್ದಾರೆ. ಜತೆಗೆ ಡಿಜಿಪಿ ಶಂಕರ್ ಬಿದರಿ ಹಾಗೂ ನಗರ ಪೊಲೀಸ್ ಆಯುಕ್ತ ಮಿರ್ಜಿ ಅವರನ್ನು ತಕ್ಷಣ ವರ್ವಾಯಿಸಬೇಕು ಎಂದೂ ಅವರು ಸರಕಾರವನ್ನು ಇದೇ ವೇಳೆ ಒತ್ತಾಯಿಸಿದ್ದಾರೆ.
ಶನಿವಾರ ಬೆಳಗ್ಗೆ ಬಾರ್ ಕೌನ್ಸಿಲ್ ಮತ್ತು ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ನಿಲುವುಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಶುಕ್ರವಾರ ತಮ್ಮ ವಿರುದ್ಧ ಮಾಧ್ಯಮಗಳು ನಡೆಸಿದ ಅಪಪ್ರಚಾರದ ವಿರುದ್ಧ ರಾಜ್ಯಾದ್ಯಂತ ಸೋಮವಾರ ಎಲ್ಲ ನ್ಯಾಯಾಲಯಗಳಲ್ಲಿ ಕಲಾಪ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಕೀಲರ ಸಂಘ ತಿಳಿಸಿದೆ.
ಅಲ್ಲದೆ, ಸೋಮವಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ದೂರು ನೀಡಲು ಉದ್ದೇಶಿಸಲಾಗಿದೆ. ಜತೆಗೆ ತಮ್ಮ ಮೇಲೆ ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳು ನಡೆಸಿದ ಹಲ್ಲೆಯ ಸಾಕ್ಷ್ಯಾಧಾರಗಳನ್ನು ರಾಜ್ಯಪಾಲರ ಗಮನಕ್ಕೆ ತರಲು ವಕೀಲರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಈ ವಿವಾದ ಹೆಚ್ಚು ಬೆಳೆಸುವುದು ಬೇಡ ಎಂಬ ಅಭಿಪ್ರಾಯವೂ ಬಾರ್ ಕೌನ್ಸಿಲ್ ಮತ್ತು ವಕೀಲರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ವ್ಯಕ್ತವಾಗಿದೆ. ಮಾಧ್ಯಮ ಮುಖ್ಯಸ್ಥರು, ಪೊಲೀಸ್ ಇಲಾಖೆ ಮತ್ತು ಸರ್ಕಾರದ ಜತೆ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು. ಅಗತ್ಯ ಬಿದ್ದರೆ ಹಿರಿಯ ರಾಜಕಾರಣಿಗಳು ಮತ್ತು ನ್ಯಾಯಾಧೀಶರನ್ನು ಸಂಧಾನಕ್ಕೆ ಆಹ್ವಾನಿಸಲು ತೀರ್ಮಾನಿಸಲಾಗಿದೆ.