ಇಬ್ಬರ ವಕೀಲರ ಜಗಳ, ನೂರು ಮಂದಿಗೆ ಪೆಟ್ಟು
ಶುಕ್ರವಾರ ಬೆಳಗ್ಗೆ ಎಎಂಸಿ ಪ್ರಕರಣದ ಆರೋಪಿ ಜನಾರ್ದನ ರೆಡ್ಡಿ ಅವರನ್ನು ಸಿವಿಲ್ ಕೋರ್ಟ್ ಕಾಂಪೆಕ್ಸ್ ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕರೆತರಲಾಯಿತು. ಈ ಸಮಯಕ್ಕೆ ಸರಿಯಾಗಿ ಕೋರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು ವಕೀಲರ ನಡುವೆ ಗಾಡಿ ತೆಗೆಯುವ ವಿಚಾರಕ್ಕೆ ಜಗಳ ನಡೆದಿತ್ತು. ಇದನ್ನು ನೋಡಿದ ಖಾಸಗಿ ಮಾಧ್ಯಮ ವಾಹಿನಿ ಪ್ರತಿನಿಧಿಗಳು ವಕೀಲರ ಗಲಾಟೆಯನ್ನು ಕೆಮೆರಾದಲ್ಲಿ ಸೆರೆಹಿಡಿಯಲು ಹೋಗಿದ್ದಾರೆ. ಇದಕ್ಕೆ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ವಕೀಲರು ಪೊಲೀಸರ ನಡುವೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ದೊಡ್ಡ ಪ್ರತಿಭಟನೆ ನಡೆದಿತ್ತು. ಆ ವೇಳೆಯಲ್ಲಿ ವಕೀಲರನ್ನು ಗೂಂಡಾಗಳು ಎಂದು ಬಿಂಬಿಸಿ, ಅಪಮಾನ ಮಾಡಲಾಗಿದೆ ಎನ್ನುವ ಸಿಟ್ಟನ್ನು ಮನಸಿನಲ್ಲಿಟ್ಟುಕೊಂಡಿದ್ದ ವಕೀಲರು, ಮಾಧ್ಯಮದ ಮೇಲೆ ಹರಿಹಾಯ್ದರು.
ಇಬ್ಬರ ವಕೀಲರು ತಮ್ಮ ಗಾಡಿ ಜಗಳ ಮರೆತು ಕೆಮೆರಾಮ್ಯಾನ್ ಹಿಂದೆ ಬಿದ್ದರು. ವಕೀಲರ ಬೆಂಬಲಕ್ಕೆ ಇನ್ನಷ್ಟು ಕರಿಕೋಟುಗಳು ಸೇರಿಕೊಂಡು ಕೋರ್ಟ್ ಆವರಣದಲ್ಲಿದ್ದವರ ಬ್ಯಾಡ್ಜ್ ನೋಡಿ ಮಾಧ್ಯಮದವರು ಎಂದು ತಿಳಿದ ತಕ್ಷಣ ಯಕ್ಕಾ ಮಕ್ಕಾ ಬಾರಿಸಿದ್ದಾರೆ.
ಸುಬ್ಬಾರೆಡ್ಡಿ ಖಂಡನೆ: ಪೊಲೀಸರು ಲಾಠಿಚಾರ್ಚ್ ಮಾಡಿದ್ದು ತಪ್ಪು. ಸಿಜೆ ಪರ್ಮಿಷನ್ ಇಲ್ಲದೆ ಲಾಠಿಚಾರ್ಚ್, ಟಿಯರ್ ಗ್ಯಾಸ್ ಬಿಟ್ಟಿದ್ದು ಏಕೆ? ಯಾರು ಯಾರಿಗೆ ಹೋಡೆದಿದ್ದಾರೆ. ಏಕೆ ಹೊಡೆದಿದ್ದಾರೆ ಎಂದು ಮೊದಲು ತಿಳಿಯಬೇಕಿದೆ.
ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದರೆ ಅದು ತಪ್ಪು ಎಂದು ಬಾರ್ ಅಸೋಸಿಯೇಷನ್ ಮುಖ್ಯಸ್ಥ ಸುಬ್ಬಾರೆಡ್ಡಿ ಹೇಳಿದ್ದಾರೆ. ಸಿಜೆ ವಿಕ್ರಮಜಿತ್ ಸೇನ್ ಅವರ ಹೈಕೋರ್ಟ್ ಕಲಾಪಗಳನ್ನು ಸ್ಥಗಿತಗೊಳಿಸಿ, ಸಿಟಿ ಸಿವಿಲ್ ಕೋರ್ಟ್ ಆವರಣಕ್ಕೆ ಧಾವಿಸಿದರು. ಆದರೆ, ಅಷ್ಟರಲ್ಲಿ ಸುಮಾರು ಅನಾಹುತಗಳು ಸಂಭವಿಸಿಬಿಟ್ಟಿತ್ತು. ಕ್ಷುಲ್ಲಕ ಜಗಳ, ಹಳೆ ದ್ವೇಷದ ಕಾರಣ ಸಂಭವಿಸಿದ ಘಟನೆಯಿಂದ ಸರ್ಕಾರ ನಾಗರಿಕರ ಮುಂದೆ ತಲೆ ತಗ್ಗಿಸುವಂತಾಗಿದೆ.