ರೌಡಿ ವಕೀಲರನ್ನು ಹಿಡಿದು ಪರಪ್ಪನ ಅಗ್ರಹಾರಕ್ಕೆ ಕಳ್ಸಿ

ಕೃಷ್ಣರಾಜ ಪುರದ ಕೆಎಸ್ಆರ್ಪಿಯಲ್ಲಿ ಕಾನ್ಸ್ಟೇಬಲ್ ಆಗಿದ್ದ ಮಹದೇವಪ್ಪ ಅವರು ಮಾರ್ಥಾಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಹದಿನೈದು ಪೊಲೀಸರಿಗೆ ತೀವ್ರವಾಗಿ ಗಾಯಗಳಾಗಿದ್ದು, ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೇದೆ ಕಿರಣ್ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದರೆ, ಕೋಡಿಗೆಹಳ್ಳಿಯ ಪೇದೆ ನಾರಾಯಣಸ್ವಾಮಿ ಎಂಬುವವರನ್ನು ನಿಮ್ಹಾನ್ಸ್ಗೆ ದಾಖಲಿಸಲಾಗಿದೆ. ಇನ್ನೂ ಕೆಲ ಪೊಲೀಸರು ವಕೀಲರ ಕಪಿಮುಷ್ಠಿಯಿಂದ ಪಾರಾಗಿ ಬಂದಿದ್ದಾರೆ. ವಕೀಲರ ರೌಡಿಯಿಸಂನಿಂದ ಬೇಸತ್ತ ಸಾರ್ವಜನಿಕರು ಕೂಡ ವಕೀಲರ ಮೇಲೆ ಕಲ್ಲು ತೂರಾಡಿದ ಘಟನೆ ನಡೆದಿದೆ.
ಜನಾರ್ದನ ರೆಡ್ಡಿಯನ್ನು ಬೆಂಗಳೂರಿನ ಕೋರ್ಟಿಗೆ ಹೈದರಾಬಾದ್ನಿಂದ ಸಿಬಿಐ ಪೊಲೀಸರು ಕರೆತಂದಾಗ ವರದಿ ಮಾಡಲು ಬಂದಿದ್ದ ಮಾಧ್ಯಮದವರು ಮತ್ತು ವಕೀಲರ ನಡುವೆ ಜಟಾಪಟಿ ಶುರುವಾಗಿ, ಪತ್ರಕರ್ತರ ಮೇಲೆ ವಕೀಲರು ಹಲ್ಲೆ ನಡೆಸಿದ್ದರು. ಆಗ ರಕ್ಷಣೆಗೆಂದು ಬಂದಿದ್ದ ಪೊಲೀಸರ ಮೇಲೆಯೂ ವಕೀಲರು ಹಲ್ಲೆ ನಡೆಸಿದ್ದರು. ಕೆಲ ಪುಂಡ ವಕೀಲರು ನ್ಯಾಯಾಲಯದ ಐದನೇ ಮಹಡಿಯಿಂದ ಭಾರವಾದ ಕುರ್ಚಿಗಳನ್ನು ಪೊಲೀಸರ ಮೇಲೆ ಎಸೆದಿದ್ದರು.
ನಿಷೇಧಾಜ್ಞೆ ಜಾರಿ : ಹತ್ತಕ್ಕೂ ಹೆಚ್ಚು ಬೈಕುಗಳಿಗೆ ಮತ್ತು ಎರಡು ಪೊಲೀಸ್ ಜೀಪುಗಳಿಗೆ ಬೆಂಕಿ ಹಚ್ಚಿರುವ ವಕೀಲರ ಪುಂಡಾಟಿಕೆ ಮಿತಿಮೀರಿದ್ದರಿಂದ ಕೋರ್ಟ್ ಆವರಣದ ಸುತ್ತಮುತ್ತ ಸಿಆರ್ಪಿಸಿಯ 144ನೇ ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿಮಾಡಲಾಗಿದೆ. ವಕೀಲರ ಗೂಂಡಾಗಿರಿಯನ್ನು ಹದ್ದುಬಸ್ತಿಗೆ ತರಲು ಪೊಲೀಸರಿಗೆ ಸಂಪೂರ್ಣ ಅಧಿಕಾರವನ್ನು ಸರಕಾರ ನೀಡಿದೆ.
ತನಿಖೆಗೆ ಆದೇಶ : ಮಾಧ್ಯಮದವರು, ಪೊಲೀಸರು ಮತ್ತು ಸಾರ್ವಜನಿಕರ ಮೇಲೂ ಬೆಂಗಳೂರಿನ ವಕೀಲರು ಹಲ್ಲೆ ನಡೆಸಿರುವ ಪ್ರಕರಣದ ತನಿಖೆ ನಡೆಸಬೇಕೆಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಈ ಪ್ರಕರಣದ ತನಿಖೆ ನಡೆಸಲಿದ್ದಾರೆ.












Click it and Unblock the Notifications