ಗಾಳಿಸುದ್ದಿ ಹರಡದಂತೆ ಜನ, ಮಾಧ್ಯಮಕ್ಕೆ ಬಿದರಿ ಮನವಿ
ಮಾಧ್ಯಮಗಳು ಕೂಡ ಯಾವುದೇ ವದಂತಿಗಳನ್ನು ಹಬ್ಬಿಸಬಾರದು. ಯಾವುದೇ ಗಾಯ ಅಥವಾ ಸಾವಿನ ಸುದ್ದಿಯನ್ನು ಪೊಲೀಸ್ ಮಹಾನಿರ್ದೇಶಕ ಅಥವಾ ಬೆಂಗಳೂರು ಆಯುಕ್ತ ಅಥವಾ ಕಾನೂನು ಮತ್ತು ಸುವ್ಯವಸ್ಥೆ ಆಯುಕ್ತರ ಅಥವಾ ಪೊಲೀಸ್ ಪಿಆರ್ಓಗಳಿಂದ ಅನುಮತಿ ಪಡೆದು ಮತ್ತು ಸುದ್ದಿ ಖಚಿತಪಡಿಸಿಕೊಂಡು ಸುದ್ದಿ ಬಿತ್ತರಿಸಬೇಕೆಂದು ಅವರು ಆಗ್ರಹಿಸಿದರು.
ವಕೀಲರ ಹಲ್ಲೆಯಿಂದಾಗಿ ಪೊಲೀಸ್ ಪೇದೆಯೊಬ್ಬರು ಮೃತರಾಗಿದ್ದಾರೆ ಎಂಬ ಸುದ್ದಿಯೂ ಬಂದಿದೆ. ಆದರೆ ಆ ಸುದ್ದಿ ಇನ್ನೂ ಖಚಿತವಾಗಿಲ್ಲ. ಖಚಿತಪಡಿಸಿಕೊಂಡ ನಂತರ ಅದನ್ನು ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದ ಬಿದರಿ, ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ಪರಿಸ್ಥಿತಿಯ ಬಗ್ಗೆ ತಿಳಿಸುವುದಾಗಿ ಅವರು ನುಡಿದರು.
ಪರಿಸ್ಥಿತಿ ತಹಬದಿಗೆ ಬಂದನಂತರವೇ ತನಿಖೆ ನಡೆಸಿ ಪುಂಡರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದರು. ತಪ್ಪಿತಸ್ಥರು ವಕೀಲರೇ ಆಗಿರಲಿ, ಮಾಧ್ಯಮದವರೇ ಆಗಿರಲಿ, ಪೊಲೀಸರೇ ಆಗಿರಲಿ ಸಂಪೂರ್ಣವಾಗಿ ತನಿಖೆ ನಡೆಸಿದ ನಂತರವೇ ಕ್ರಮ ಕೈಗೊಳ್ಳುವುದಾಗಿ ಶಂಕರ್ ಬಿದರಿ ಹೇಳಿದರು.
ಈ ನಡುವೆ, ಪೊಲೀಸರು ಇಡೀ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣವನ್ನು ಸುತ್ತುವರಿದಿದ್ದು, ಹಲ್ಲೆ ಮಾಡಿದ ವಕೀಲರ ಬೇಟೆಯಲ್ಲಿ ನಿರತರಾಗಿದ್ದಾರೆ. ಕೋರ್ಟ್ ಆವರಣದಲ್ಲಿ ಹಲವಾರು ಕಕ್ಷಿಗಾರರು, ವಕೀಲರು ಇನ್ನೂ ಇದ್ದು, ಒಬ್ಬೊಬ್ಬರನ್ನೇ ಪರಿಶೀಲಿಸಿ ಪೊಲೀಸರು ಹೊರಬಿಡುತ್ತಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿರುವ ನಾಲ್ಕು ಪೊಲೀಸರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.