ಅಪ್ಪ ಮಗನನ್ನು ಸುಮ್ಮನೆ ಬಿಡುವುದಿಲ್ಲ : ಯಡಿಯೂರಪ್ಪ
ಬಿಜೆಪಿ ವರಿಷ್ಠರು ಆರು ತಿಂಗಳ ಹಿಂದೆ ಮುಖ್ಯಮಂತ್ರಿ ಪದವಿ ಮರಳಿ ನೀಡುವುದಾಗಿ ನೀಡಿದ್ದ ವಾಗ್ದಾನವನ್ನು ಮರೆತಿರುವ ಹಿರಿಯರಿಗೆ, ಅವರ ಮಾತನ್ನು ನೆನಪಿಸಲು ದೆಹಲಿಗೆ ಹೋಗಿದ್ದೆನೇ ಹೊರತು ನಾನೇನು ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿ ಅಲ್ಲವೇ ಅಲ್ಲ ಎಂದು ಹೇಳಿರುವ ಅವರು, ತಮ್ಮ ಮಾತಿನ ಕಿಡಿಯನ್ನು ದೇವೇಗೌಡರ ಕುಟುಂಬದ ಮೇಲೆ ಸುರಿಸಿದ್ದಾರೆ.
"ನಾನು ಜೈಲಿಗೆ ಹೋಗಿದ್ದರಿಂದ, ಅಧಿಕಾರ ಕಳೆದುಕೊಂಡಿದ್ದರಿಂದ ಸಂತಸಗೊಂಡಿರುವ ದೇವೇಗೌಡರೇ ನಿಮ್ಮ ಆಸೆ ಪೂರೈಸಿರಬಹುದು. ನಾನು ಪಟ್ಟಿರುವ ಎಲ್ಲ ಸಂಕಷ್ಟಗಳಿಗೂ ನೀವೇ ಕಾರಣ. ನಿಮ್ಮನ್ನು ವಿಧಾನಸೌಧದ ಒಳಗೆ ಬರಲು ಬಿಟ್ಟಿರಲಿಲ್ಲ. ಆದರೂ ಬರುತ್ತಿದ್ದೀರಿ. ರಾಜ್ಯಾದ್ಯಂತ ಪ್ರವಾಸ ಮಾಡಿ ನಿಮ್ಮ ಬಣ್ಣ ಬಯಲು ಮಾಡುತ್ತೇನೆ. ಈ ಯಡಿಯೂರಪ್ಪ ಅಪ್ಪ ಮಗನನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಆಕ್ರೋಶದ ಮಾತುಗಳನ್ನು ಯಡಿಯೂರಪ್ಪ ಆಡಿದ್ದಾರೆ.
"ನಾನು ಒತ್ತಡಕ್ಕೆ ಮಣಿದು ಬಿಜೆಪಿ ಬಿಡುತ್ತೇನೆಂದು ಗೌಡರು ತಿಳಿದಿದ್ದಾರೆ. ಗೌಡರು ಕನಸು ಕಾಣುವುದನ್ನು ಬಿಡಲಿ. ನಾನು ಪಕ್ಷ ಬಿಡುವುದು ಕನಸಿನ ಮಾತು. ಪಕ್ಷ ಬಿಡುವುದಿರಲಿ, ಬಿಜೆಪಿ ಜೊತೆ ಮುಂದೆಂದೂ ಜೆಡಿಎಸ್ ಕೈಜೋಡಿಸಲು ಅವಕಾಶ ನೀಡುವುದಿಲ್ಲ. ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಲು ಯಾವತ್ತೂ ಬಿಡುವುದಿಲ್ಲ" ಎಂದು ಯಡಿಯೂರಪ್ಪ ಅವರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಅಪ್ಪಮಗನಿಂದ ದೂರವಿರಬೇಕೆಂದು ಸದಾನಂದ ಗೌಡರಿಗೆ ಕಿವಿಮಾತನ್ನೂ ಯಡಿಯೂರಪ್ಪ ಹೇಳಿದ್ದಾರೆ.
ಬರ್ಫಿ ತಿನ್ನಿಸಿದ ಡಿವಿಎಸ್ : ಯಡಯೂರಪ್ಪನವರಿಗೆ ಎಲ್ಲೆಡೆಯಿಂದ ಶುಭಾಶಯಗಳು ಮಹಾಪೂರವೇ ಹರಿದುಬಂದಿದೆ. ಬಿಎಸ್ವೈ ಕೋಪಕ್ಕೆ ಗುರಿಯಾಗಿದ್ದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಬೆಳಿಗ್ಗೆ ಯಡಿಯೂರಪ್ಪನವರಿಗೆ ಬಾದಾಮ್ ಬರ್ಫಿ ತಿನ್ನಿಸಿ ಶುಭ ಹಾರೈಸಿದರು. ಈಶ್ವರಪ್ಪ ಅವರು ಕೂಡ ಶುಭ ಕೋರಿ, ಯಡಿಯೂರಪ್ಪನವರು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸಲು, ನಾವು ಅವರ ಜೊತೆಗಿರುತ್ತೇವೆ ಎಂಬ ಮಾತುಗಳನ್ನು ಆಡಿದ್ದಾರೆ. ಸಮಾಜ ಸೇವಕ ಮುತ್ತಪ್ಪ ರೈ ಕೂಡ ಯಡಿಯೂರಪ್ಪನವರಿಗೆ ಶುಭ ಕೋರಿದ್ದಾರೆ.
ಯಡಿಯೂರಪ್ಪನವರು ಮಾಡಿದ ಭಾಷಣಗಳಲ್ಲಿ ಅಥವಾ ಅವರ ಆಪ್ತರು ಆಡಿದ ನುಡಿಗಳಲ್ಲಿ, ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದು, ಅದಕ್ಕಾಗಿ ಹಲವಾರು ಜನರು ಷಡ್ಯಂತ್ರ ನಡೆಸಿ ಚೂರಿ ಇರಿದಿದ್ದು, ತುಂಬಿ ತುಳುಕುತ್ತಿತ್ತು. ಶೋಭಾ ಅವರು, ಅವರಿಗಿಲ್ಲದ ಅಧಿಕಾರ ನಮಗೇಕೆ ಎಂಬಂತಹ ಭಾವುಕ ನುಡಿಗಳನ್ನು ಆಡಿ ಕೊರಳುಬ್ಬಿಸಿಕೊಂಡರೆ, ರಾಜೂಗೌಡ ಅವರು, ಕಾಡಲ್ಲೇ ಇರಲಿ ಗುಹೆಯಲ್ಲೇ ಇರಲಿ ಹುಲಿ ಎಂದಿಗೂ ಹುಲಿಯೇ ಎಂಬ ಆಕ್ರೋಶದ ನುಡಿಗಳನ್ನು ಆಡಿದ್ದಾರೆ.
ಮುಂದಿನ ನಡೆ ಏನು? : ಜನ್ಮದಿನದಂದು ತಮ್ಮ ಮುಂದಿನ ರಾಜಕೀಯ ನಡೆ ತಿಳಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಬಹಿರಂಗ ಸಭೆಯಲ್ಲಿ ಈ ಕುರಿತಾಗಿ ಏನನ್ನೂ ಯಡಿಯೂರಪ್ಪ ನುಡಿಯದಿದ್ದರೂ, ಅವರನ್ನು ಭೇಟಿ ಮಾಡಿ ಶುಭಕೋರಲು ಬಂದಿದ್ದ ಬಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಅವರ ಮೂಲಕ ಯಡಿಯೂರಪ್ಪ ತಮ್ಮ ಸ್ಪಷ್ಟ ಸಂದೇಶವನ್ನು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ರೇಸ್ ಕೋರ್ಸ್ ರಸ್ತೆಯಲ್ಲಿ ನಿರ್ಮಲಾ ಜೊತೆ ಅವರು ಸುಮಾರು ಹೊತ್ತು ಚರ್ಚೆ ನಡೆಸಿದರು. ವರಿಷ್ಠರಿಗೆ ಕಳಿಸಿರುವ ಸಂದೇಶವಾದರೂ ಏನು?