ಪೊಲೀಸ್ ಅಧಿಕಾರಿಯನ್ನೇ ಪ್ರಶ್ನಿಸಿದ ದಿಟ್ಟ ವಿದ್ಯಾರ್ಥಿ

ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ಹಿಂದುಳಿದ ವರ್ಗದವರ ಕುಂದುಕೊರತೆ ಸಭೆ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಸಂಚಾರಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿದ್ದೂ ಅಲ್ಲದೆ ಅದನ್ನು ಪ್ರಶ್ನಿಸಿದ ವಿದ್ಯಾರ್ಥಿಗೆ ಧಮಕಿ ಹಾಕಿದ್ದಕ್ಕೆ ಸಾರಿ ಕೇಳಿದ ಪ್ರಸಂಗ ನಡೆದಿದೆ.
ಏನಾಯಿತೆಂದರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿರುವ ಹೋಟೆಲ್ ಆವರಣದಲ್ಲಿ ಸಿಗರೇಟ್ ಸೇದುತ್ತಾ ನಿಂತಿದ್ದರು. ಅದನ್ನು ಗಮನಿಸಿದ ಮಂಗಳೂರು ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಮಹಾಂತೇಶ್ - ಸರ್ ನೀವೊಬ್ಬ ಉನ್ನತ ಅಧಿಕಾರಿ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುವುದು ತಪ್ಪು - ಎಂದು ಹೇಳಿದ್ದೇ ತಡ ಸಿಗರೇಟ್ ಗಿಂತ ವೇಗವಾಗಿ ಧಗಧಗ ಉರಿದುಹೋದ ಆ ಪೊಲೀಸ್ ಮಹಾಶಯ - ಏಯ್ ನಾ ಯಾರಂತ ತಿಳಿದಿದ್ದೀಯೋ? - ಎಂದು ಕಿಡಿಕಾರುತ್ತಾ ಯುವ ವಿದ್ಯಾರ್ಥಿಯ ಮೇಲೆ ಅವಾಚ್ಯ ಶಬ್ದಗಳ ಭರಪೂರ ಪ್ರಯೋಗ ಮಾಡಿದರು.
ಗಂಡುಮೆಟ್ಟಿನ ನೆಲದ ವಿದ್ಯಾರ್ಥಿ ಮಹಾಂತೇಶ್ ಇದರಿಂದ ಒಂದಿನಿತೂ ಹಿಂಜರಿಯಲಿಲ್ಲ. ಮುಂದ ... ಡಿಸಿಪಿ ಕರೆದಿರುವ ಸಭೆಯನ್ನೇ ಸೂಕ್ತ ವದಿಕೆಯನ್ನಾಗಿ ಪರಿವರ್ತಿಸಿಕೊಂಡು ಡಿಸಿಪಿ (ಅಪರಾಧ) ಧರ್ಮಯ್ಯ ಅವರನ್ನು ಕೇಳಿಯೇ ಬಿಟ್ಟ - ಸರ್ರ, ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್ ಅಧಿಕಾರಿಯೇ ಸಿಗರೇಟ್ ಸೇದಿ ಕಾನೂನು ಉಲ್ಲಂಘಿಸಿದರೆ ಏನು ಕ್ರಮ ಕೈಗೊಳ್ಳುತ್ತೀರಿ - ಎಂದು ದಿಟ್ಟತನದಿಂದ ಪ್ರಶ್ನಿಸಿದ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಹೇಳು, ಯಾರು ಆ ವ್ಯಕ್ತಿ? - ಎಂದು ಇಲಾಖೆ ಮರ್ಯಾದೆ ಹರಾಜು ಹಾಕಿದ ಅಧಿಕಾರಿ ಯಾರಪ್ಪಾ ಎಂದು ಕಣ್ಣಂಚಿನಲ್ಲೇ ಗರಂ ಆಗಿದ್ದಾರೆ.
ನಿಮ್ಮ ಪಕ್ಕದಲ್ಲೇ ಕುಳಿತಿರುವ ಸಂಚಾರಿ ಪೊಲೀಸ್ ಅಧಿಕಾರಿ - ಎಂದು ವಿದ್ಯಾರ್ಥಿ ಮಹಾಂತೇಶ್ ಕೂಲಾಗಿ ಹೇಳಿದ್ದಾನೆ. ವೇದಿಕೆಯಲ್ಲಿದ್ದ ತಪ್ಪಿತಸ್ಥ ಪೊಲೀಸ್ ಅಧಿಕಾರಿ ಎಸಿಪಿ (ಟ್ರಾಫಿಕ್) ಜಿವಿ ಸುಬ್ರಮಣ್ಯ ಮತ್ತು ಧರ್ಮಯ್ಯ ಸೇರಿದಂತೆ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ. ಪೊಲೀಸ್ ಧರ್ಮ ಎತ್ತಿಹಿಡಿಯಲು ಧರ್ಮಯ್ಯ ಅವರು ವಿದ್ಯಾರ್ಥಿಯಿಂದ ವಿವರ ಕೇಳಿದರು. ಚಾಚೂತಪ್ಪದೆ ವಿದ್ಯಾರ್ಥಿ ಮಹಾಂತೇಶ್ ನಡೆದ ಘಟನೆಯನ್ನು ಒಂದಿಷ್ಟೂ ಅಳುಕದೆ ವಿವರಿಸಿದ್ದಾರೆ.
ಆಗ ಧರ್ಮಯ್ಯನವರು - ಈಗಾಗಲೇ ಎಲ್ಲರ ಮುಂದೆ ಆತನಿಗೆ ಅವಮಾನದ ಶಿಕ್ಷೆಯಾಗಿದೆ. ಬೇರೆ ಶಿಕ್ಷೆಯ ಅಗತ್ಯವಿಲ್ಲ - ಎಂದು ಹೇಳಿ ವಿದ್ಯಾರ್ಥಿ ಮಹಾಂತೇಶನ ಧೈರ್ಯವನ್ನು ಕೊಂಡಾಡಿದರು. ಬಳಿಕ 'ಅಪರಾಧಿ' ಪೊಲೀಸಪ್ಪ ಸಹ ಕ್ಷಮೆಯಾಚಿಸಿ, ಮುಂದೆ ಈ ರೀತಿ ನಡೆಯದಂತೆ ಎಚ್ಚರವಹಿಸುವುದಾಗಿ ಹೇಳಿದರು ಅಂತಿಟ್ಟುಕೊಳ್ಳಿ.












Click it and Unblock the Notifications