ಆಟೋ ರಿಕ್ಷಾ ಮುಷ್ಕರ, ಶಾಲೆಗಳಿಗೆ ರಜೆ
ಆಟೋದ ಹಂಗಿಲ್ಲದೆ ಶಾಲೆಗೆ ಹೋಗಿ ಬಂದು ಮಾಡುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗೆ ಈ ರಜೆ ಬಿಸಿ ತಟ್ಟುವುದಿಲ್ಲ. ಇನ್ನು, ಈ ಮೂರು ಚಕ್ರ ಗಾಡಿಯ ಸೇವೆಯನ್ನು ಅವಲಂಬಿಸಿದ ಪ್ರಯಾಣಿಕರಿಗೆ, ಆಸ್ಪತ್ರೆ ಮುಂತಾದ ತುರ್ತು ಅಗತ್ಯದ ಸೇವೆ ಪಡೆಯುವವರಿಗೆ ತೊಂದರೆ ನಿಶ್ಚಿತ.
ಆಟೋ ಪ್ರಯಾಣ ದರವನ್ನು ಕನಿಷ್ಠ 3 ರುಪಾಯಿ ಏರಿಸಿ (ಅಲ್ಲಿಗೆ ಮಿನಿಮಮ್ 20 ರುಪಾಯಿ) ಜತೆಗೆ ಕಿಲೋ ಮೀಟರ್ ಒಂದಕ್ಕೆ 1 ರುಪಾಯಿ ಹೆಚ್ಚಿಸಿ ಎಂಬ ಬೇಡಿಕೆಯೊಂದಿಗೆ ಆಟೋ ಚಾಲಕರು ನಾಳೆ ತಮ್ಮ ಆಟೋಗಳನ್ನು ರಸ್ತೆಗೆ ಇಳಿಸದಿರಲು ನಿರ್ಧರಿಸಿದ್ದಾರೆ. ಈ ಮಧ್ಯೆ, ನಾಳೆಯೇ (ಫೆ. 28) ದೇಶಾದ್ಯಂತ ಲಕ್ಷಾಂತರ ಮಂದಿ ಬ್ಯಾಂಕ್ ಉದ್ಯೋಗಿಗಳು ತಮ್ಮ ನಾನಾ ಬೇಡಿಕೆಗಳನ್ನು ಮುಂದೊಡ್ಡಿ, ಬ್ಯಾಂಕ್ ವಹಿವಾಟು ಸ್ಥಗಿತಗೊಳಿಸಲಿದ್ದಾರೆ.
'ಜನವರಿ 17ರಂದು ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಅನೇಕ ದಿನಗಳಿಂದ ಬಾಕಿಯುಳಿದಿರುವ ತಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಿ ಈ ವರ್ಷದ ಬಜೆಟ್ಟಿನಲ್ಲಿ ಅಗತ್ಯ ಹಣಕಾಸು ನೆರವು ನೀಡಬೇಕು' ಎಂದು ಸರಕಾರದ ಮೇಲೆ ಒತ್ತಡ ಹೇರಲು ನಾಳೆ ಮುಷ್ಕರ ನಡೆಸುವುದಾಗಿ ಆಟೋ ಚಾಲಕರ ಸಂಘ ಘೋಷಿಸಿದೆ.
ಏನಪಾ ಬೇಡಿಕೆಗಳು ಅಂದರೆ ... ಆಟೋ ಮೀಟರ್ ಕನಿಷ್ಠ ದರವನ್ನು 24 ರು. ಗೆ ಏರಿಸಬೇಕು. ಪ್ರತಿ ಕಿಮೀ ದರವನ್ನು 12 ರೂ. ಗೆ ನಿಗದಿಪಡಿಸಬೇಕು. ಆಟೋ ಚಾಲಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ವಸತಿ ನಿವೇಶನ ಕಲ್ಪಿಸಬೇಕು. ಪಡಿತರ ಚೀಟಿ ವಿತರಣೆ ಹಾಗೂ ಸಿಂಪ್ಯೂಟರ್ ಅಳವಡಿಕೆ ಬೇಡಿಕೆ.
2008ರಲ್ಲೇ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಯಲ್ಲಿ ಆಟೋ ಚಾಲಕರಿಗೆ ಸದಸ್ಯತ್ವ ನೀಡಬೇಕು ಎಮದು ತೀರ್ಮಾನವಾದರೂ ಈವರೆಗೆ ಯಾವುದೇ ಆಟೋ ಚಾಲಕರ ಹೆಸರನ್ನು ನೋಂದಾಯಿಸಿಕೊಳ್ಳುವುದಿಲ್ಲ. ಈಗಾಗಲೇ ಕಲ್ಯಾಣ ಮಂಡಳಿ ರಚನೆ ಆಗಿದ್ದರೂ ಅದಕ್ಕೆ ಸೂಕ್ತ ಧನ ಸಹಾಯ ಒದಗಿಸಿಲ್ಲ ಎಂದು ಸಂಘ ಆರೋಪಿಸಿದೆ.