ಲೋಕಾಯುಕ್ತ: ವಿಶ್ವನಾಥ ಆಪ್ತರ ಮನೆಯಲ್ಲೇನಿತ್ತು?

ವಿಶ್ವನಾಥರ ಗೆಳೆಯ ರಾಜನಕುಂಟೆಯ ಸೋಮಶೇಖರ ರೆಡ್ಡಿ, ಬಿಜೆಪಿ ಕಾರ್ಯಕರ್ತ ರಾಮಲಿಂಗೇಗೌಡ, ಪತ್ನಿ ವಾಣಿ ವಿಶ್ವನಾಥ್ ಪಾಲುದಾರಿಕೆಯಲ್ಲಿರುವ ಶ್ರೀ ವೆಂಕಟೇಶ್ವರ ಸರ್ವೀಸ್ ಸ್ಟೇಷನ್ ಪೆಟ್ರೋಲ್ ಬಂಕ್ ಮತ್ತು ಸ್ನೇಹಿತ ಸತೀಶ್ ಮನೆಗಳಲ್ಲಿ ಶೋಧ ನಡೆಸಿ ಬಹಳಷ್ಟು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.
ಸೋಮಶೇಖರ ರೆಡ್ಡಿ: ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿರುವ 20 ಆಸ್ತಿಗಳ ಕ್ರಯಪತ್ರಗಳು, ಸಂಬಂಧಿ ಮತ್ತು ಪಾಲುದಾರರ ಹೆಸರಿನ 13 ಬ್ಯಾಂಕ್ ಖಾತೆಗಳು ಹಾಗೂ ಮೂರು ಕಾರು ಹಾಗೂ 40 ಆಸ್ತಿಗಳ ಮಾರಾಟ ಕ್ರಯಪತ್ರಗಳು ಪತ್ತೆಯಾಗಿವೆ.
ರಾಮಲಿಂಗೇಗೌಡ: ಸ್ವಂತ ಹೆಸರಿನ 23 ಆಸ್ತಿ ಕ್ರಯಪತ್ರಗಳು (ಅಂದಾಜು ಮೌಲ್ಯ 2,09,04,000 ರೂ), ಬೇರೆಯವರ ಹೆಸರಿನಲ್ಲಿರುವ 4 ಆಸ್ತಿ ಕ್ರಯಪತ್ರಗಳು, ಇನ್ನೋವಾ, ಸ್ವಿಫ್ಟ್ ಕಾರು, ಟೊಯೊಟಾ ಪಾರ್ಚುನರ್ ಕಾರಿಗೆ ಮುಂಗಡ ಹಣ ಸಂದಾಯ ಮಾಡಿರುವ ರಸೀದಿ. ಸ್ವಂತ ಹೆಸರಿನಲ್ಲಿರುವ ಒಂದು ವೈನ್ ಶಾಪ್ ಮತ್ತು ಒಂದು ಬಾರ್. ಪತ್ನಿ ಹೆಸರಿನಲ್ಲಿ ಒಂದು ಬಾರ್ ಅಂಡ್ ರೆಸ್ಟೊರೆಂಟ್. ಒಂದು ಕೆಜಿ 147 ಗ್ರಾಂ ಚಿನ್ನಾಭರಣ ಮತ್ತು 13 ಕೆಜಿ ಬೆಳ್ಳಿ ವಸ್ತುಗಳು.
ವೆಂಕಟೇಶ್ವರ ಪೆಟ್ರೋಲ್ ಬಂಕ್: ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿರುವ 4 ಆಸ್ತಿ ಕ್ರಯಪತ್ರಗಳು, ಪೆಟ್ರೋಲ್ ಬಂಕ್ ಪಾಲುದಾರಿಕೆಗೆ ಸಂಬಂಧಿಸಿದ ದಾಖಲೆಗಳು ಮತ್ತು 10 ಬ್ಯಾಂಕ್ ಖಾತೆಗಳು. ಸತೀಶ್: ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿರುವ ಐದು ಆಸ್ತಿ ಕ್ರಯಪತ್ರಗಳು, ಒಂದು ಇನ್ನೋವಾ ಮತ್ತು ಎರಡು ಸ್ಯಾಂಟ್ರೊ ಕಾರು.
ಈ ನಡುವೆ ಲೋಕಾಯುಕ್ತ ಪೊಲೀಸರು ಯಲಹಂಕ ಉಪನಗರದಲ್ಲಿರುವ ರಾಮಲಿಂಗೇಗೌಡರ ಕಚೇರಿ ಮತ್ತು ಯಲಹಂಕ ಉಪನಗರದ ಪಾರ್ಕ್ವ್ಯೂ ಅಪಾರ್ಟ್ಮೆಂಟ್ನಲ್ಲಿರುವ ಆರೋಪಿ ಸಂಬಂಧಿ ವಿನಯ್ ಕುಮಾರ್ ಮನೆಗಳ ಮೇಲೆಯೂ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಲೋಕಾಯುಕ್ತ ಎಡಿಜಿಪಿ ಎಚ್.ಎನ್.ಸತ್ಯನಾರಾಯಣರಾವ್ ತಿಳಿಸಿದ್ದಾರೆ.
ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ವಿ.ಶಶಿಧರ್ ಎಂಬವರು ಲೋಕಾಯುಕ್ತ ವಿಶೇಷ ನ್ಯಾಯಾಲದಯಲ್ಲಿ ಅಧಿಕಾರ ದುರುಪಯೋಗ ಹಾಗೂ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸುಧೀಂದ್ರರಾವ್ರವರು ತನಿಖೆ ನಡೆಸಿ ವರದಿ ಸಲ್ಲಿಸಲು ಲೋಕಾಯಕ್ತ ಪೊಲೀಸರಿಗೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.











Click it and Unblock the Notifications