ಪದ್ಮನಾಭ ಖಜಾನೆ ಮೌಲ್ಯ ಅಂದಾಜು ಒಂದು ಲಕ್ಷ ಕೋಟಿ
ಸುಪ್ರೀಂಕೋರ್ಟ್ ನ ಆದೇಶದ ಮೇರೆಗೆ ವೇಲಾಯುಧನ್ ನಾಯರ್ ನೇತೃತ್ವದ ಪರಿಣತರ ತಂಡಕ್ಕೆ ಇನ್ನೂ ಹಲವು ಕ್ಷೇತ್ರಗಳ ಪ್ರತಿನಿಧಿಗಳು ದೇಗುಲದ ಇ ಮತ್ತು ಎಫ್ ಕೊಠಡಿಗಳಲ್ಲಿರುವ ಸಂಪತ್ತಿನ ಮೌಲ್ಯಮಾಪನ ಮತ್ತು ದಾಖಲೀಕರಣ ಪ್ರಕ್ರಿಯೆ ಸೋಮವಾರ ಸಂಜೆಯಿಂದ (ಫೆ.20) ಆರಂಭವಾಗಲಿದೆ. ಈ ಪ್ರಕ್ರಿಯೆ ಎಷ್ಟು ಕಾಲ ಬೇಕಾಗಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಕೇರಳ ಎಲೆಕ್ಟ್ರಾನಿಕ್ ಕಾರ್ಪೊರೇಶನ್(Keltron) ಅತ್ಯಾಧುನಿಕ ಸಾಧನ, ಪರಿಕರಗಳನ್ನು ಖರೀದಿಸಲಾಗಿದೆ. ಅಮೂಲ್ಯ ಸಂಪತ್ತಿನ ವ್ಯವಸ್ಥಿತ ಮೌಲ್ಯಮಾಪನ ಕ್ಷಿಪ್ರವಾಗಿ ನಡೆಯಲಿದೆ. ಸುಪ್ರೀಂಕೋರ್ಟ್ ನೇಮಿಸಿರುವ 12 ಮಂದಿ ಸದಸ್ಯರು ಮೌಲ್ಯಮಾಪನ ಕಾರ್ಯದ ಬಗ್ಗೆ ನಿಗಾವಹಿಸಲಿದ್ದಾರೆ.
ಅನಂತ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳ ಪೈಕಿ ಐದು ಕೊಠಡಿಗಳನ್ನು ತೆರೆಯಲಾಗಿದೆ. ಐದು ಕೊಠಡಿಯಲ್ಲಿ ಸಿಕ್ಕಿರುವ ಸಂಪತ್ತು ಎಲ್ಲರನ್ನು ಬೆರಗುಗೊಳಿಸಿದೆ. ಸುಮಾರು 150 ವರ್ಷಗಳಿಂದ ರಹಸ್ಯವಾಗಿದ್ದ ಈ ಸಂಪತ್ತಿನ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಈ ನಡುವೆ ಬಿ ಕೊಠಡಿಯ ಬಗ್ಗೆ ಇನ್ನೂ ಸುಪ್ರೀಂಕೋರ್ಟ್ ತೀರ್ಪು ನೀಡಿಲ್ಲ. ದೇಗುಲದ ರಹಸ್ಯ ಹೊರ ತೆಗೆಯಲು ಕಾರಣಕರ್ತರಾಗಿದ್ದ ಅರ್ಜಿದಾರ ಸುಂದರರಾಜನ್ ಕಳೆದ ವರ್ಷ ಮೃತಪಟ್ಟರೆ, ಮತ್ತೊಬ್ಬ ಅರ್ಜಿದಾರ ಕೂಡಾ ಕಳೆದ ತಿಂಗಳು ಸಾವನ್ನಪ್ಪಿದ್ದಾರೆ.