ಈ ಬಾರಿ ಬಜೆಟ್ ನಲ್ಲಿ ಮಠಗಳಿಗೆ ಎಷ್ಟು ಕೋಟಿ?
ವಿಎಚ್ ಆಚಾರ್ಯ ಅವರ ಅಗಲಿಕೆಯಿಂದ ಬಡವಾಗಿರುವ ಮುಖ್ಯಮಂತ್ರಿ ಡಿಎಸ್ ಸದಾನಂದ ಗೌಡರಿಗೆ ಆರ್ಥಿಕ ಸಲಹೆ ನೀಡಲು ಮಾಜಿ ಮುಖ್ಯಮಂತ್ರಿ, ವಿತ್ತ ಸಚಿವ ಆರು ಬಾರಿ ಬಜೆಟ್ ಮಂಡಿಸಿರುವ ದಾಖಲೆ ಹೊಂದಿರುವ ಯಡಿಯೂರಪ್ಪ ಅವರು ನೆರವಾಗುವ ಸಾಧ್ಯತೆಯಿದೆ.
ಯಡ್ಡಿ ಬಜೆಟ್ ಮಾದರಿ: ಸರ್ಕಾರದ ಜಮೀನು, ಆರ್ಥಿಕ ಅನುದಾನ, ಕೊಡುಗೆಗಳು ಹೀಗೆ ಸರ್ಕಾರ ಧಾರ್ಮಿಕ ಕೇಂದ್ರಗಳಿಗೆ ಅನೇಕ ರೀತಿಯ ಸಹಾಯ ಒದಗಿಸುತ್ತಲೇ ಇದೆ. ಈ ಬಜೆಟ್ನಲ್ಲೂ ಸರ್ಕಾರದ ನೀತಿಯಲ್ಲಿ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಸದಾನಂದಗೌಡ ಹೇಳಿದ್ದಾರೆ. ಆದರೆ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಬಗ್ಗೆ ಸುದ್ದಿ ಇಲ್ಲ.
ಯಡಿಯೂರಪ್ಪನವರ ಹಾದಿಯಲ್ಲೆ ನಡೆಯಲಿಚ್ಚಿಸಿರುವ ಪ್ರಸಕ್ತ ಸರ್ಕಾರ ಬಜೆಟ್ನಲ್ಲಿ ದೇವಾಲಯಗಳಿಗೆ ಮತ್ತಷ್ಟು ನೆರವು ಒದಗಿಸಲಿದೆ. ದೇವಾಲಯಗಳ ದುರಸ್ತಿಗೆ 395 ಕೋಟಿ ಮತ್ತು ಮಠಗಳಿಗೆ 75 ಕೋಟಿ ನೀಡಿರುವ ಬಿಜೆಪಿ ಸರ್ಕಾರ 2008-11ರ ಅವಧಿಯಲ್ಲಿ ಮಠಗಳಿಗೆ ಒಂದು ಲಕ್ಷದಿಂದ 2 ಕೋಟಿಯವರೆಗೂ ನೆರವು ನೀಡಿದೆ.[2011-12 ಸಾಲಿನ ಬಜೆಟ್ ಮುಖ್ಯಾಂಶಗಳನ್ನು ಓದಿ]
ಸರ್ಕಾರದ ನೆರವು ಪಡೆದ ಪ್ರಮುಖ ಧಾರ್ಮಿಕ ಸ್ಥಳಗಳೆಂದರೆ ರಾಮಚಂದ್ರಾಪುರ ಮಠ, ಅಮೃತ್ ಮಹಲ್ ಕಾವಲ್,ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಮುಂತಾದವು. ಶಿವಮೊಗ್ಗ ಜಿಲ್ಲೆ 55 ಕೋಟಿ ರೂ ಪಡೆದಿದ್ದರೆ, ತುಮಕೂರು ಜಿಲ್ಲೆ 33 ಕೋಟಿ ಪಡೆದಿದೆ. ಮೇಲುಕೋಟೆ ಅಭಿವೃದ್ಧಿಗೆ 10 ಕೋಟಿ ರು ನೀಡಲಾಗಿದೆ.
ಎರಡು ಕೋಟಿಗಿಂತಲೂ ಹೆಚ್ಚಿನ ನೆರವು ಪಡೆದ ಕುಮಾರಸ್ವಾಮಿ ಶಿವಯೋಗಿ ಮಠ, ಶ್ರೀ ಮುರುಘಾ ಮಠ-ಚಿತ್ರದುರ್ಗ, ತರಳಬಾಳು ಜಗದ್ಗುರು ಬೃಹನ್ಮಠ ಪ್ರಮುಖ ಕೇಂದ್ರವಾಗಿವೆ. ಮಂತ್ರಾಲಯದ ಮಠಕ್ಕೆ 2009-10ರಲ್ಲಿ 3 ಕೋಟಿ 2010-11ರಲ್ಲಿ 7 ಕೋಟಿ ನೆರವು ನೀಡಲಾಗಿದೆ.
ಇದಲ್ಲದೆ, ಚರ್ಚುಗಳ ದುರಸ್ತಿ, ಕಟ್ಟಡ ನಿರ್ಮಾಣ, ಕ್ರಿಶ್ಚಿಯನ್ ಪಂಗಡ ಅಭಿವೃದ್ಧಿಗೆ 50 ಕೋಟಿ ರು ನೀಡಲಾಗಿತ್ತು. ಇದು ಮುಂದುವರೆದು ಹಜ್ ಯಾತ್ರೆಗೆ ಅನುದಾನ, ಜೈನ, ಬೌದ್ಧ ಸೇರಿದಂತೆ ಎಲ್ಲರಿಗೂ ಸಮನಾಗಿ ಹಂಚುವ ಸಾಧ್ಯತೆಯಿದೆ.