ದೆಹಲಿಯಲ್ಲಿ ವಾಹನದಲ್ಲಿ ಸ್ಫೋಟ : ಉಗ್ರರ ಕೃತ್ಯ?
ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ನಿವಾಸದಿಂದ ಕೇವಲ 200 ಮೀಟರ್ ದೂರದಲ್ಲಿ ಔರಂಗಜೇಬ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ರಾಯಭಾರಿಗಳಿದ್ದ 109 ಸಿಡಿ 35 ನಂಬರ್ ಇದ್ದ ಇನ್ನೋವಾ ವಾಹನಕ್ಕೆ ಹಿಂದಿನಿಂದ ಒಂದು ವಾಹನ ಬಂದು ಡಿಕ್ಕಿ ಹೊಡೆದಾಗ ಭಾರೀ ಸದ್ದು ಕೇಳಿಬಂದಿದೆ ಮತ್ತು ರಾಯಭಾರಿಗಳಿದ್ದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಘಟನೆ ಸಂಜೆ 4 ಗಂಟೆಗೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಕಟ್ಟೆಚ್ಚರಿಕೆ ವಹಿಸಲು ಸೂಚಿಸಲಾಗಿದ್ದು, ಇಡೀ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದಾರೆ. ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಧಾವಿಸಿದ್ದು ಕುರುಹುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಗಾಯಾಳುವನ್ನು 42 ವರ್ಷದ ಥಾಯ್ ಯತೋಶ್ ಎಂದು ಗುರುತಿಸಲಾಗಿದೆ. ವಾಹನದ ಡ್ರೈವರ್ ಮನೋಜ್ ಶರ್ಮಾ ಕೂಡ ಗಾಯಗೊಂಡಿದ್ದಾರೆ. ಅವರನ್ನು ರಾಮ್ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಗ್ರರ ದಾಳಿ? : ಈ ಘಟನೆಯ ಹಿಂದೆ ಉಗ್ರರ ಕೈವಾಡ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಫೋಟ ಸಂಭವಿಸುವ ಮುನ್ನ ಒಂದು ಬೈಕ್ ಸ್ಫೋಟಗೊಂಡ ಇನ್ನೋವಾ ವಾಹನವನ್ನು ಹಿಂಬಾಲಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬೈಕಿನಲ್ಲಿದ್ದವರು ಇನ್ನೋವಾಗೆ ಯಾವುದೇ ಪದಾರ್ಥ ಅಂಟಿಸಿದ ಗಳಿಗೆ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇಸ್ರೇಲ್ ಪ್ರತಿಕ್ರಿಯೆ : ತಮ್ಮ ದೇಶದ ರಾಯಭಾರಿಗಳ ಮೇಲೆ ದೆಹಲಿಯಲ್ಲಾದ ದಾಳಿ ಉಗ್ರರ ಕೃತ್ಯವಾಗಿದ್ದು, ಇದನ್ನು ಸಹಿಸುವುದಿಲ್ಲ ಎಂದು ಇಸ್ರೇಲ್ ಕೆಂಡಕಾರಿದೆ. ಜಾರ್ಜಿಯಾದಲ್ಲಿ ಕೂಡ ಇಸ್ರೇಲ್ ಮೇಲೆ ಬಾಂಬ್ ದಾಳಿಗೆ ಸಂಚು ಹೂಡಲಾಗಿತ್ತು. ಆದರೆ, ಬಾಂಬನ್ನು ನಿಷ್ಕ್ರಿಯಗೊಳಿಸಲಾಗಿದೆ. ದೆಹಲಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.