ಸ್ಪೀಕರ್ ಬೋಪಯ್ಯ ನಿರ್ಧಾರಕ್ಕೆ ಬಿಜೆಪಿ ತತ್ತರ
ಬೆಂಗಳೂರು, ಫೆ. 9: ವಿಧಾನಸಭೆಯಲ್ಲೇ ಬ್ಲೂ ಫಿಲಂ ವೀಕ್ಷಿಸಿದವರು ಸದನಕ್ಕೆ ಬಂದರೆ ನಾನು ಒಂದು ಕ್ಷಣವೂ ಸ್ಪೀಕರ್ ಕುರ್ಚಿ ಮೇಲೆ ಕೂರುವುದಿಲ್ಲ. ಯಾರನ್ನು ಬೇಕಾದರೂ ಕೂರಿಸಿಕೊಳ್ಳಿ. ರಾಜೀನಾಮೆ ಕೊಟ್ಟು ಇಲ್ಲಿಂದಲೇ ಹೊರಡುವೆ'- ಹೀಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದು ಸ್ಪೀಕರ್ ಕೆಜಿ ಬೋಪಯ್ಯ.
'ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣದಿಂದ ನನಗೆ ತುಂಬಾ ನೋವಾಗಿದೆ. ಹೀಗಾಗಿ ಈ ಕೃತ್ಯ ಎಸಗಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ' ಎಂದು ಒತ್ತಡ ಹೇರಲು ಬಂದ ಸರ್ಕಾರದ ಪ್ರಮುಖರಿಗೆ ಎಚ್ಚರಿಕೆಯ ಸಂದೇಶ ನೀಡಿದರು ಎನ್ನಲಾಗಿದೆ.
ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಈಶ್ವರಪ್ಪ, ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ಕುಮಾರ್ ಅವರು ಬುಧವಾರ ಸ್ಪೀಕರ್ ಅವರನ್ನು ಭೇಟಿ ಮಾಡಿ, 'ಸಚಿವರಿಗೆ ಸದನ ಪ್ರವೇಶಕ್ಕೆ ನಿರ್ಬಂಧ ಹೇರುವುದು ಬೇಡ' ಎಂದು ಮನವಿ ಮಾಡಿದರು. ಇದಕ್ಕೆ ಸ್ಪೀಕರ್ ಮಣಿದಿಲ್ಲ. 'ಅವರು (ಆರೋಪಿ ಶಾಸಕರು) ಸದನಕ್ಕೆ ಬರಬೇಕೆನ್ನುವುದಾದರೆ ನಾನು ಸದನಕ್ಕೆ ಬರುವುದಿಲ್ಲ'
'ಆಯ್ಕೆ ನಿಮ್ಮದು. ಸ್ಪೀಕರ್ ಆದ ದಿನದಿಂದ ನನಗೆ ನೆಮ್ಮದಿ ಇಲ್ಲದಂತಾಗಿದೆ. ಈ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ಖಚಿತ' ಎಂದು ಹೇಳಿದಾಗ ಆಡಳಿತ ಪಕ್ಷದ ಮುಖಂಡರೇ ದಂಗಾದರು ಎನ್ನಲಾಗಿದೆ. 'ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ವಿಚಾರಣೆ ಪೂರ್ಣವಾಗುವವರೆಗೂ ಮೂವರು ಶಾಸಕರನ್ನು ಸದನದಿಂದ ಹೊರಗಿಡುತ್ತೇನೆ. ಈ ವಿಷಯದಲ್ಲಿ ನನ್ನ ನಿರ್ಧಾರವೇ ಅಚಲ' ಎಂದು ಹೇಳಿ ಆ ನಿರ್ಧಾರವನ್ನು ಪ್ರಕಟಿಸಿದರು ಕೂಡ.