ಮಣಪ್ಪುರಂ ಫೈನಾನ್ಸ್ನಲ್ಲಿ ಠೇವಣಿ ಇಡಬೇಡಿ ಎಚ್ಚರ

ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಅಥವಾ ಇದೇ ಸಮೂಹದ ಅಂಗ ಸಂಸ್ಥೆಯಾಗಿರುವ ಮಣಪ್ಪುರಂ ಅಗ್ರೊ ಫಾರ್ಮ್ಸನಲ್ಲಿ (ಎಂಎಜಿಆರ್ಒ) ಠೇವಣಿ ಇಟ್ಟರೆ ಅದಕ್ಕೆ ಸಾರ್ವಜನಿಕರೇ ಹೊಣೆಗಾರರು ಎಂದು ಆರ್ಬಿಐ ತಿಳಿಸಿದೆ.
ಇದಕ್ಕೆ ಕಾರಣವೇನೆಂದರೆ ಮಣಪ್ಪುರಂ ಫೈನಾನ್ಸ್ ಸಂಸ್ಥೆಯು, ಠೇವಣಿ ಇರಿಸಿಕೊಳ್ಳದ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವುದರಿಂದ, ಸಾರ್ವಜನಿಕರಿಂದ ಠೇವಣಿಗಳನ್ನು ಇರಿಸಿಕೊಳ್ಳುವಂತಿಲ್ಲ. ಹಾಗೆ ಮಾಡಲು ಕಾಯ್ದೆ ಪ್ರಕಾರ ಅವಕಾಶವೂ ಇಲ್ಲ. ಹೀಗೆ ಠೇವಣಿ ಇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಆರ್ಬಿಐ ತಿಳಿಸಿದೆ.
ಕೇರಳದ ತ್ರಿಶ್ಯೂರ್ ಮೂಲದ, ಈ ಮೊದಲಿನ ಮಣಪ್ಪುರಂ ಜನರಲ್ ಫೈನಾನ್ಸ್ ಆಂಡ್ ಲೀಸಿಂಗ್ ಲಿಮಿಟೆಡ್ಗೆ ಆರ್ಬಿಐ ಕಾಯ್ದೆ 1934ರ ಅನ್ವಯ, ಠೇವಣಿಗಳನ್ನು ಸ್ವೀಕರಿಸಲು ಅಥವಾ ನವೀಕರಿಸಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಗಮನಾರ್ಹವೆಂದರೆ ಮಣಪ್ಪುರಂ ಫೈನಾನ್ಸ್, ಇದಕ್ಕೂ ಮೊದಲು ಆರ್ಬಿಐನಲ್ಲಿ ಠೇವಣಿ ಸ್ವೀಕರಿಸುವ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿ ನೋಂದಣಿ ಮಾಡಿಕೊಂಡಿತ್ತು. 2011ರ ಮಾರ್ಚ್ನಲ್ಲಿ ಠೇವಣಿ ಸ್ವೀಕರಿಸದ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿ ಪರಿವರ್ತನೆಗೊಂಡಿತ್ತು. ಕೆಲ ಪ್ರಕರಣಗಳಲ್ಲಿ ಅವಧಿ ಪೂರ್ಣಗೊಂಡ ಠೇವಣಿಗಳ ಹಣ ಮರಳಿಸದೇ, ಸ್ಥಿರ ಠೇವಣಿಗಳ ರಸೀದಿ ನೀಡುತ್ತಿರುವುದು ತನ್ನ ಗಮನಕ್ಕೆ ಬಂದಿದೆ ಎಂದು ಆರ್ಬಿಐ ಎಚ್ಚರಿಸಿದೆ.












Click it and Unblock the Notifications