ಒಂದು ದುರಂತ ಮರೆಯುವ ಮುನ್ನವೇ ಇನ್ನೆರಡು

ಕೆಆರ್ಎಸ್ ಬಳಿಯ ಬಲಮುರಿ ಫಾಲ್ಸ್ನಲ್ಲಿ ಈಜುವುದು ಅಪಾಯಕಾರಿ ಎಂದು ಬೋರ್ಡ್ ತಗುಲಿಸಿ, ಈಜುವುದನ್ನು ಜಿಲ್ಲಾಡಳಿತ ನಿಷೇಧಿಸಿದ್ದರೂ ಈಜುವ ಸಾಹಸಕ್ಕಿಳಿದ ರಾಧಾಕೃಷ್ಣ ಬೈಯಾರಿ (19) ಎಂಬ ಯುವಕ ಭಾನುವಾರ ದುರಂತ ಮೃತ್ಯುವಿಗೀಡಾಗಿದ್ದಾನೆ. ಮೃತ ಕಾರ್ಕಳ ಜಿಲ್ಲೆಯ ಬಾಳೆಗೊಂದಿಯವನು.
ಕೆಆರ್ ವನಂ ಮಾಧ್ವ ಹಾಸ್ಟೆಲ್ನಲ್ಲಿ ವಾಸವಿದ್ದ ರಾಧಾಕೃಷ್ಣ ತನ್ನ ಇನ್ನಿತರ ಹಾಸ್ಟೆಲ್ ಸ್ನೇಹಿತರ ಜೊತೆಗೆ ಬಲಮುರಿಗೆ ಮೋಜುಮಸ್ತಿಗೆಂದು ಹೋಗಿದ್ದ. ಎರಡು ತಾಸು ನೀರಾಟವಾಡಿದ ಬಳಿಕ ನದಿಯ ಬಲಬದಿಯಲ್ಲಿರುವ ನಾಲೆಯಲ್ಲಿ ಈಜುವುದಕ್ಕೆ ಇಳಿದಿದ್ದಾನೆ. ಈಜಲು ಸಾಧ್ಯವಾಗದೆ ಮುಳುಗಿದ್ದಾನೆ. ಸ್ನೇಹಿತರು ಹರಸಾಹಸಪಟ್ಟು ಆತನನ್ನು ಮೇಲೆತ್ತಿದರೂ ಆತ ಬದುಕುಳಿಯಲಿಲ್ಲ.
ಅಮಾಯಕ ಮಕ್ಕಳ ಸಾವು : ಶ್ರೀರಂಗಪಟ್ಟಣ ತಾಲೂಕಿನ ಬೋರೆ ಆನಂದೂರು ಗ್ರಾಮದಲ್ಲಿ ವರುಣ ನಾಲೆಗೆ ಮಕ್ಕಳಿಬ್ಬರನ್ನು ನೀರಿಗೆ ತಳ್ಳಿ ತಾನೂ ಕೂಡ ನೀರಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ಮಕ್ಕಳು ಚೆಲು (11) ಮತ್ತು ಮಗ ಗೌತಮ್ (8) ಸಾವಿಗೀಡಾಗಿದ್ದರೆ, ತಾಯಿ ನಿರ್ಮಲಾ (28) ಬದುಕುಳಿದಿದ್ದಾಳೆ.
ಜೀವನದಲ್ಲಿ ನೊಂದಿದ್ದ ನಿರ್ಮಲಾ ಆತ್ಮಹತ್ಯೆಗೆ ನಿರ್ಧರಿಸಿ ಮೊದಲು ಮಕ್ಕಳನ್ನು ನಾಲೆಗೆ ತಳ್ಳಿದ್ದಾಳೆ, ನಂತರ ತಾನೂ ಹಾರಿಕೊಂಡಿದ್ದಾಳೆ. ಮಕ್ಕಳು ಮತ್ತು ಆಕೆಯ ಚೀರಾಟ ಕೇಳಿ ಗ್ರಾಮಸ್ಥರು ಧಾವಿಸಿದ್ದಾರೆ. ಗ್ರಾಮಸ್ಥರು ನಿರ್ಮಲಾಳನ್ನು ಪಾರು ಮಾಡಿದರೆ, ಮಕ್ಕಳು ಬದುಕುಳಿಯಲಿಲ್ಲ. ಮಕ್ಕಳನ್ನು ಕಳೆದುಕೊಂಡ ನಿರ್ಮಲಾಳ ಆಕ್ರಂದನ ಮಾತ್ರ ಕರುಳು ಕಿತ್ತುವಂತಿತ್ತು.












Click it and Unblock the Notifications