ಮಾಧವನ್ ನಾಯರ್ ಆರೋಪಿ:ಸಿವಿಸಿ ವರದಿ
ಇಸ್ರೋದ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಹಾಗೂ ಇತರ ಮೂವರು ಹಿರಿಯ ವಿಜ್ಞಾನಿಗಳು ಹೊಣೆಗಾರರಾಗಿದ್ದಾರೆ ಎಂದು ಹಗರಣದ ಬಗ್ಗೆ ತನಿಖೆ ನಡೆಸಿರುವ ಪ್ರತ್ಯೂಷ್ ಸಿನ್ಹಾ ನೇತೃತ್ವದ ಐವರು ಸದಸ್ಯರ ತಂಡವು ತೀರ್ಮಾನಿಸಿದೆ.
ಇಸ್ರೋದ ಮಾಜಿ ವೈಜ್ಞಾನಿಕ ಕಾರ್ಯದರ್ಶಿ ಎ. ಭಾಸ್ಕರ ನಾರಾಯಣ, ಅಂತರಿಕ್ಷ್ ಮಾಜಿ ಕಾರ್ಯಕಾರಿ ನಿರ್ದೇಶಕ ಕೆ.ಆರ್.ಶ್ರೀಧರ ಮೂರ್ತಿ ಹಾಗೂ ಇಸ್ರೋ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಕೆ.ಎನ್. ಶಂಕರ್ ದೋಷಿಗಳೆಂದು ವರದಿಯಲ್ಲಿ ಸೂಚಿಸಲಾಗಿದೆ.
2005ರಲ್ಲಿ ಇಸ್ರೋದ ವಾಣಿಜ್ಯ ಘಟಕವಾದ ಅಂತರಿಕ್ಷ್ ಎರಡು ಉಪಗ್ರಹಗಳನ್ನು ನಿರ್ಮಿಸಿ, ಅವುಗಳನ್ನು ವಾಣಿಜ್ಯ ಬ್ರಾಂಡ್ಬ್ಯಾಂಡ್ ಸೇವೆಗಳನ್ನು ನೀಡುವ ದೇವಾಸ್ ಸಂಸ್ಥೆಗೆ ಎಸ್-ಬ್ಯಾಂಡ್ ತರಂಗಗುಚ್ಛಗಳ ಪ್ರಸಾರಕ್ಕಾಗಿ ನೀಡುವ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು.
ಇದಕ್ಕಾಗಿ ದೇವಾಸ್ 1000 ಕೋಟಿ ರೂ.ಗಳನ್ನು ಪಾವತಿಸುವಂತೆಯೂ ಅಂತರಿಕ್ಷ್ ಸೂಚಿಸಿತ್ತು. ಆದರೆ ಈ ಒಪ್ಪಂದ ಕಾರ್ಯಗತಗೊಂಡಲ್ಲಿ ಸರಕಾರಕ್ಕೆ 2 ಲಕ್ಷ ಕೋಟಿ ರೂ. ವರೆಗೂ ಭಾರೀ ನಷ್ಟ ಉಂಟಾಗಬಹುದಿತ್ತು.
ಮಾಧ್ಯಮಗಳು ಈ ಒಪ್ಪಂದದ ಹಿಂದೆ ಭಾರೀ ದೊಡ್ಡ ಭ್ರಷ್ಟಾಚಾರ ನಡೆದಿರುವುದಾಗಿ ವರದಿಗಳನ್ನು ಪ್ರಕಟಿಸಿದ ಬಳಿಕ ವಿವಾದ ಬೆಳಕಿಗೆ ಬಂದಿತ್ತು. ಇಸ್ರೋ ತನ್ನ ವೆಬ್ಸೈಟ್ನಲ್ಲಿ ಸಿನ್ಹಾ ಸಮಿತಿಯ ವರದಿಯ ನಿರ್ಣಯ ಹಾಗೂ ಶಿಫಾರಸುಗಳನ್ನು ಪ್ರಸಾರ ಮಾಡಿದೆ.
ಮಾಧವನ್ ನಾಯರ್ ಸೇರಿದಂತೆ ಆರೋಪಿಗಳ ವಿರುದ್ಧ ಪಿಂಚಣಿ ಕಾನೂನುಗಳು ಹಾಗೂ ಇತರ ಕಾನೂನು ನಿಯಮಗಳ ಕುರಿತಾದ ಪ್ರಚಲಿತ ಸೆಕ್ಷನ್ಗಳಡಿ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಲಾಗಿದೆ.