ಬಿಎಂಟಿಸಿಗೆ ಚಳ್ಳೆಹಣ್ಣು ತಿನ್ನಿಸಿದ ಕಳ್ಳ ಟೆಕ್ಕಿ ಸೆರೆ
ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ಬಸ್ ನಿಲ್ದಾಣ ಮಾರ್ಗದ ಬಿಎಂಟಿಸಿ ವೋಲ್ವೋ ಬಸ್ ಕಂಡೆಕ್ಟರ್ ಕೆಬಿಎಸ್ ನಿಲ್ದಾಣಕ್ಕೆ ಬಂದಾಗ ಎಲ್ ಸಿಡಿ ಫಲಕಗಳು ಕಾಣೆಯಾಗಿರುವುದನ್ನು ನೋಡಿದ್ದಾನೆ. ತಕ್ಷಣವೇ ಬಾಗಿಲನ್ನು ಮುಚ್ಚುವಂತೆ ಚಾಲಕನಿಗೆ ಹೇಳಿ ಎಲ್ಲರ ತಪಾಸಣೆಗೆ ತೊಡಗಿದ್ದಾನೆ.
ತಪಾಸಣೆ ವೇಳೆ ಸಿಕ್ಕಿಬಿದ್ದ ಟೆಕ್ಕಿ ಸಾಗರ್ ನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಠಾಣೆಗೆ ಎಂಟ್ರಿ ಕೊಟ್ಟಿದ್ದೆ ತಡ ಪೊಲೀಸರ ಮುಂದೆ ಅಂಗಲಾಚಿ ನಿಂತ ಟೆಕ್ಕಿ ಸಾಗರ್, 'ಸಾರ್ ಯಾವುದೇ ಕೇಸ್ ಹಾಕಬೇಡಿ. ನನ್ನ ಕೆರಿಯರ್ ಹಾಳಾಗುತ್ತೆ. ಎಷ್ಟು ದಂಡ ಬೇಕಾದ್ರೂ ಕಟ್ಟುತ್ತೇನೆ' ಎಂದು ಬೇಡಿದ್ದಾನೆ.
ಕಳೆದ ಐದು ದಿನಗಳಲ್ಲಿ ಸುಮಾರು ಅರ್ಧ ಡಜನ್ ಗ್ಯಾಡ್ಜೆಟ್ಸ್ ಗಳನ್ನು ಕಳೆದುಕೊಂಡ ವೋಲ್ವೋ ಬಸ್ ಸಿಬ್ಬಂದಿ ಈ ಬಗ್ಗೆ ದೂರು ನೀಡಿದ್ದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಬಾಗ್ಮನೆ ಟೆಕ್ ಪಾರ್ಕ್ ನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಸಾಗರ್ ರೆಡ್ಡಿ ಉದ್ಯೋಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಕಂಪನಿಯೊಂದಕ್ಕೆ ಸಂದರ್ಶನಕ್ಕೆ ಹೋಗಿ ಬರುವಾಗ ಈ ಕೃತ್ಯ ಎಸೆಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.