ಆಂಧ್ರ: ಘಟಾನುಘಟಿ ಐಎಎಸ್ ಗಳೇ ಜೈಲುಪಾಲು
ಕುತೂಹಲದ ಸಂಗತಿಯೆಂದರೆ ನಿನ್ನೆ ಬಂಧಿತರಾಗಿರುವ ಆಚಾರ್ಯ ಮತ್ತು ಶ್ರೀಲಕ್ಷ್ಮಿ ಅತ್ಯಂತ ಪ್ರತಿಭಾನ್ವಿತ ಅಧಿಕಾರಿಗಳು. ಅವರು ಬಂಧನಕ್ಕೊಳಗಾದ ಪ್ರಕರಣಗಳನ್ನು ಹೊರತುಪಡಿಸಿ, ಬೇರೆ ಯಾವ ಕಳಂಕಗಳೂ ಅವರ ಮೇಲಿಲ್ಲ. ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿಯೂ ಇನ್ನೂ ಇಬ್ಬರು ಹಿರಿಯ ಶ್ರೇಣಿಯ ಅಧಿಕಾರಿಗಳು ಈಗಾಗಲೇ ಸಿಬಿಐ ಅತಿಥಿಗಳಾಗಿದ್ದಾರೆ.
ಇಬ್ಬರೂ ಅತ್ಯುನ್ನತ ಶ್ರೇಣಿಯಲ್ಲಿ ಐಎಎಸ್ ಗೆ ಆಯ್ಕೆಯಾದ ಅಧಿಕಾರಿಗಳು. ಆಚಾರ್ಯರಂತೂ ಗೃಹ ಕಾರ್ಯದರ್ಶಿ ಜವಾಬ್ದಾರಿಯೊಂದಿಗೆ ಕಳೆದ ವಾರವಷ್ಟೇ ಚಂಚಲಗೂಡ ಜೈಲಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಸ್ವತಃ ಅದೇ ಜೈಲಿಗೆ ರವಾನೆಯಾಗಿದ್ದಾರೆ. ಪ್ರಸ್ತುತ ಅವರು ಸಿಬಿಐ ವಶದಲ್ಲಿದ್ದರೂ ರಾತ್ರಿ ಅವರು ಚಂಚಲಗೂಡ ಜೈಲಿನಲ್ಲೇ ಕಳೆಯಬೇಕಾಗಿದೆ.
ಶ್ರೀಲಕ್ಷ್ಮಿ ಸಹ ಕಿರಿಯ ವಯಸ್ಸಿಗೇ ಐಎಎಸ್ ಪಟ್ಟಕ್ಕೇರಿದ ಪ್ರತಿಭಾನ್ವಿತೆ. ಸಿಬಿಐನ ಈ ಕರಾರುವಕ್ಕಾದ ಕಾರ್ಯತತ್ಪರತೆಯ ಹಿಂದೆ ಸಿಬಿಐ ಜಂಟಿ ನಿರ್ದೇಶಕ, ಮೀಡಿಯಾ ಡಾರ್ಲಿಂಗ್ ವಿವಿ ಲಕ್ಷ್ಮಿನಾರಾಯಣ, ಸ್ಪೆಷಲ್ ಎಸ್ಪಿ ಖಾನ್ ಅವರಂತಹ ಅಧಿಕಾರಿಗಳ ತಂಡ ದುಡಿಯುತ್ತಿದೆ.