ಜಗನ್ ಗೆ ಆಘಾತ: ಭಾವಮೈದುನ ಸುನಿಲ್ ಬಂಧನ
ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಅತ್ಯಾಪ್ತ ವಿ. ವಿಜಯ್ ಸಾಯಿ ರೆಡ್ಡಿ ಅವರನ್ನು ಸಿಬಿಐ ಜ.2ರಂದು ಬಂಧಿಸಿದೆ. ಹಾಗೆಯೇ, ಎಮ್ಮಾರ್ ಹಗರಣದಲ್ಲಿ ಈಗಾಗಲೇ ಉದ್ಯಮಿ ತುಮ್ಮಲ ರಂಗಾರಾವ್ ಸಿಬಿಐ ಬಂಧನದಲ್ಲಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಕೋನೇರು ಪ್ರಸಾದ್ ಆದೇಶಿಸಿದಂತೆ ಸುನಿಲ್ ಗೆ 80 ಕೋಟಿ ರುಪಾಯಿ ನೀಡಿರುವುದಾಗಿ ರಂಗಾರಾವ್ ಕೋರ್ಟಿನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಎಮ್ಮಾರ್ ಹಗರಣದಲ್ಲಿ ಕೋನೇರು ಪ್ರಸಾದ್ 138 ಕೋಟಿ ರುಪಾಯಿ ಅಕ್ರಮ ಎಸಗಿದ್ದಾರೆ ಎನ್ನಲಾಗಿದೆ. ಮೂಲತಃ ಕಡಪ ಜಿಲ್ಲೆಯವರಾದ ಸುನಿಲ್, ಚೆನ್ನೈನಲ್ಲಿ ಎಂಬಿಎ ಮಾಡಿದ್ದಾರೆ. ಅವರ ತಂದೆ ಭೂಗರ್ಭಶಾಸ್ತ್ರಜ್ಞರು.
ಸಿಬಿಐ ಅಧಿಕಾರಿಗಳು ನಗರದ ಹೊರಭಾಗದಲ್ಲಿ ಗೋಪನ್ನಪಾಳ್ಯದ ಬಳಿಯಿರುವ ಪ್ರತಿಷ್ಠಿತ ಅಪರ್ಣ ಸೈಬರ್ ಕಂಟ್ರಿಯಲ್ಲಿ ಸುನಿಲ್ ಗೆ ಸೇರಿದ ಭವ್ಯ ಬಂಗಲೆಯನ್ನು ಜಾಲಾಡಿದ್ದಾರೆ. ಜತೆಗೆ, ಸುನಿಲ್ ಪತ್ನಿ ಕೃಷ್ಣ ತೇಜಾ ಅವರು ಜ್ಯುಬಿಲಿ ಹಿಲ್ಸ್ ನಲ್ಲಿ ನಡೆಸುತ್ತಿರುವ ಇಂಟೀರಿಯರ್ ಡೆಕೋರೇಶನ್ ಕಚೇರಿಯ ಮೇಲೂ ದಾಳಿ ನಡೆಸಿದ್ದಾರೆ.