ಏನೂ ಅಂತ ಮಾತ್ನಾಡ್ತೀರಿ ಮಿಸ್ಟರ್ ಸುಬ್ಬಾರೆಡ್ಡಿ !?
ಕಳೆದ ವಾರ ವಕೀಲರ ಮುಷ್ಕರದ ಮಧ್ಯೆಯೇ ಸನ್ಮಾನ್ಯ ಸುಬ್ಬಾರೆಡ್ಡಿ ಅವರು ಮಾಧ್ಯಮದ ಜತೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಬೆಳಗಿನ ಹೊತ್ತು ಟ್ರಾಫಿಕ್ ದಟ್ಟಣೆ ಕಡಿಮೆಯಿರುತ್ತದೆ. ಆಗ ವಕೀಲರು (ಹೌದು ವಕೀಲರು ಮಾತ್ರ. ಸದ್ಯ ಎಲ್ಲ ಸವಾರರು ಅಲ್ಲ!) ಟ್ರಾಫಿಕ್ ರೂಲ್ಸ್ ಅನ್ನು ಗಾಳಿಗೆ ತೂರಿ, ಗಾಳಿಯಲ್ಲಿ ವಾಹನಗಳನ್ನು ಓಡಿಸಿಕೊಂಡು ಹೋಗಬಹುದು. ಇನ್ನು ಕೆಲಸದ ಒತ್ತಡದಿಂದ ಒಂದೇ ವಾಹನದಲ್ಲಿ ಮೂವರು ಸಂಚರಿಸಬಹುದು ಎಂದೂ ಪ್ರಕಾಂಡ ನ್ಯಾಯ ಪಂಡಿತ ಸುಬ್ಬಾರೆಡ್ಡಿ ವಾದ ಮಂಡಿಸಿದ್ದಾರೆ.
ಹೋಲ್ಡ್ ಆನ್ ಸುಬ್ಬಾರೆಡ್ಡಿ ಅವರೇ! ನಿಮ್ಮ ಮಾತಿಗೂ ಮುನ್ನ ನಿಮ್ಮ ವಕೀಲರ ಕೃತಿಯ (ಮುಷ್ಕರ) ಬಗ್ಗೆ ನಿಮ್ಮದೇ ವಕೀಲಜನ ನಿಮ್ಮ ಬಗ್ಗೆಯೇ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಅಂತಹುದರಲ್ಲಿ ಸ್ವತಃ ಆ ವಕೀಲರ ಯಜಮಾನಿಕೆಯನ್ನು ಅನಾದಿಕಾಲದಿಂದಲೂ ಹೊತ್ತಿರುವ ನೀವು ಹೀಗೆ ಅವರನ್ನು ದಾರಿ ತಪ್ಪಿಸುವ ಹೇಳಿಕೆ ನೀಡುವುದು ಎಷ್ಟು ನ್ಯಾಯಯುತ? ಇನ್ನೂ ಒಂದು ಮಾತು ಹೇಳಿದ್ದೀರಿ, ಜ್ಞಾಪಕ ಇದೆಯಾ ತಮಗೆ? ಏನೋ ಬಿಸಿರಕ್ತದ ವಕೀಲರು ಇಂತಹ ಪುಂಡಾಟಿಕೆ ಮೆರೆದಿದ್ದಾರೆ ಎಂದಿದ್ದೀರಿ. ಯಾಕಿಂತಹ ಬಾಲಿಷ ಉತ್ತರ ನೀಡಿದ್ದೀರಿ ರೆಡ್ಡಿ?
ಅಲ್ಲಾ ಮೈಲಾರ್ಡ್! ವಕೀಲರಿಗೇನು ಕೊಂಬು ಇರುತ್ತದಾ? ಹೆಲ್ಮೆಟ್ ಹಾಕಿಕೊಳ್ಳುವುದಕ್ಕೆ ಆ ಕೊಂಬೇ ಅಡ್ಡ ಬರುತ್ತದಾ? ಅದೇನೋ ಬೆಳಗಿನ ಹೊತ್ತು, ಟ್ರಾಫಿಕ್ ಇಲ್ಲದ ವೇಳೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಎಂದಿದ್ದೀರಿ. ಇದೇನು ವಕೀಲರಿಗೆ ಮಾತ್ರ ಹೇಳಿದ್ದೀರೋ ಅಥವಾ ಎಲ್ಲ ಮಹಾಜನತೆಗೂ ಇದನ್ನೇ ಹೇಳಿದ್ದೀರಾ? ಅಲ್ಲ ಸ್ವಾಮಿ ಅಪಘಾತಕ್ಕೆ ಬೆಳಗ್ಗೆ ಮಧ್ಯಾಹ್ನ ಸಾಯಂಕಾಲ ರಾತ್ರಿ ಅಂತ ಕಾಲಘಟ್ಟಗಳು ಇರುತ್ತವಾ!? ಅದು ರಾಹುಕಾಲ, ಗುಳಿಕಾಲಕ್ಕೆ ಕಾಯುತ್ತಾ ಹೊಂಚುಹಾಕುತ್ತಿರುತ್ತದಾ? ಅಪಘಾತ ಸಂಭವಿಸಲು ಕೆಲವೇ ಸೆಕೆಂಡುಗಳು ಸಾಕು ಮಿಸ್ಟರ್ ಸುಬ್ಬಾರೆಡ್ಡಿ.
ಇಷ್ಟೆಲ್ಲ ಆದರೂ ನಿಮ್ಮ ಬಗ್ಗೆ ಅಪಾರ ಕಾಳಜಿ ಇದೆ ನಮಗೆ. ಲ್ಮೆಟ್ ಧರಿಸದೆ, ದ್ವಿಚಕ್ರವಾಹನದಲ್ಲಿ ಮೂವರು ಸಂಚರಿಸುತ್ತಾ, (ಸಾಧ್ಯವಾದರೆ ನಾಲ್ವರು), ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಾ ನಿಮ್ಮ ವಕೀಲರು ಹೋಗುವಾಗ ಸುದೈವದಿಂದ ಅಪಘಾತ ಆಗದಿರಲಿ, ಹೆಲ್ಮೆಟ್ ಇಲ್ಲದ ನಿಮ್ಮ ಅಮೂಲ್ಯ ತಲೆಗಳು ಉಳಿಯಲಿ ಎಂದು ಆಶಿಸುತ್ತಾ...