ರೇವಣ್ಣನ ಜೊತೆ ಏನ್ಮಾತಾಡಿದ್ರಿ ಈಶ್ವರಪ್ಪ?
ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ವಿಧಾನಸೌಧದಲ್ಲಿ ಈಶ್ವರಪ್ಪ-ರೇವಣ್ಣ ರಹಸ್ಯ ಮಾತುಕತೆ ನಡೆಸಿದ್ದು, ಸರ್ಕಾರ ಸಂಕಷ್ಟಕ್ಕೆ ಸಿಲುಕಿದರೆ ರಕ್ಷಣೆಗೆ ಧಾವಿಸಲು ಸಜ್ಜಾಗಿರುವಂತೆ ಈ ಸಂದರ್ಭದಲ್ಲಿ ಈಶ್ವರಪ್ಪ ಸಂದೇಶ ರವಾನಿಸಿದ್ದಾರೆ.
ತಮಗೆ ಮುಖ್ಯಮಂತ್ರಿ ಇಲ್ಲವೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕೆಂದು ಬೇಡಿಕೆ ಇಟ್ಟು ಬಂಡೆದ್ದಿರುವ ಯಡಿಯೂರಪ್ಪ ಅವರಿಗೆ ಬುದ್ದಿ ಕಲಿಸಲು ಮುಂದಾಗಿರುವ ಬಿಜೆಪಿ ಮುಖಂಡರು ಇದೀಗ ಜೆಡಿಎಸ್ನೊಂದಿಗೆ ಸಂಬಂಧ ಕುದುರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಯಡಿಯೂರಪ್ಪ ಅವರನ್ನು ಎದುರಿಸಲು ಬಿಜೆಪಿ ನಾಯಕರು ಜೆಡಿಎಸ್ ಪಕ್ಷವನ್ನು ಗುರಾಣಿ ಮಾಡಿಕೊಂಡಿದ್ದು, ನೀವೇನಾದರೂ ಪಕ್ಷ ತೊರೆದರೆ ನಾವು ಜೆಡಿಎಸ್ ಸಹವಾಸಕ್ಕೆ ಸಿದ್ಧ ಎನ್ನುವ ಸಂದೇಶ ರವಾನಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಉಭಯ ನಾಯಕರು ಪರಸ್ಪರ ಗುಸು ಗುಸು ಚರ್ಚೆ ನಡೆಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಲಿ ಮುಖ್ಯ ಮಂತ್ರಿ ಸದಾನಂದಗೌಡರಿಗೆ ತೀರಾ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ಈ ಭೇಟಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಂಕ್ರಾಂತಿವರೆಗೆ ಕಾದು ನೋಡುವುದಾಗಿ ಯಡಿಯೂರಪ್ಪ ಧಮಕಿ ಹಾಕಿರುವ ಹಿನ್ನೆಲೆಯಲ್ಲಿ ಬಿಜೆಪಿ ಇದೀಗ ಜೆಡಿಎಸ್ ಪರ್ಯಾಯವಾಗಿದೆ.
ಒಂದು ವೇಳೆ ಯಡಿಯೂರಪ್ಪ ತಮ್ಮ ಜೊತೆಯಲ್ಲಿ ಗರಿಷ್ಠ 25 ಶಾಸಕರನ್ನು ಸೆಳೆದೊಯ್ದರೂ ಸಹ ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆಯಾಗಬಾರದು ಎನ್ನುವುದು ಬಿಜೆಪಿ ಮುಖಂಡರ ಆಲೋಚನೆಯಾಗಿದೆ.
ಹೀಗಾಗಿ ಜೆಡಿಎಸ್ ಮುಖಂಡರೊಟ್ಟಿಗೆ ಒಳಗೊಳಗೇ ಬಾಂಧವ್ಯ ಕುದುರಿಸುತ್ತಿರುವ ಬಿಜೆಪಿ ನಾಯಕರು, ಯಾವುದೇ ಪರಿಸ್ಧಿತಿ ಎದುರಾದರೂ ಅದಕ್ಕೆ ಸಿದ್ಧ ಎನ್ನುವ ಆತ್ಮ ವಿಶ್ವಾಸದಲ್ಲಿದ್ದಾರೆ.
ಯಡಿಯೂರಪ್ಪ ಆರೆಸ್ಸೆಸ್ ಮಾತಿಗೆ ಬಗ್ಗಿದ್ದಾರೆಯೇ? ರೇವಣ್ಣನಿಗೆ ಈಶ್ವರಪ್ಪ ನೀಡಿದ ಆಶ್ವಾಸನೆ ಏನು? ...