ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಡದ ಮೇಲೆ ಬೂದಿ ಮುಚ್ಚಿದ ಬಿಜೆಪಿ ನಾಯಕರು

By Prasad
|
Google Oneindia Kannada News

Cease fire in Karnataka BJP
ಬೆಂಗಳೂರು, ಜ. 11 : ಅಸಮಾಧಾನದ ಹೊಗೆ ಹೊರಹಾಕಲು ಬಿಡಬಾರದು, ಭಿನ್ನಮತ ಸ್ಫೋಟಗೊಳ್ಳಲು ಅವಕಾಶ ನೀಡಬಾರದು, ಪಕ್ಷ ಬಲಪಡಿಸಲು ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕುರ್ಚಿಗಾಗಿ ಕಾದಾಟ ನಡೆಸಿರುವ ಬಿಜೆಪಿಯ ರಾಜ್ಯದ ನಾಯಕರಿಗೆ ಆರ್‌ಎಸ್ಎಸ್ ಮುಖಂಡರು ಉಪದೇಶ ನೀಡಿದ್ದಾರೆ.

ಡಾಲರ್ಸ್ ಕಾಲನಿಯಲ್ಲಿರುವ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಅವರ ನಿವಾಸದಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಪಕ್ಷದಲ್ಲಿ ಉದ್ಭವವಾಗಿರುವ ಆಂತರಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಮುಖಂಡರು ಸಾಕಷ್ಟು ಬೆವರು ಹರಿಸಬೇಕಾಯಿತು. ಭುಗಿಲೆದ್ದಿರುವ ದಾಯಾದಿ ಕಲಹಕ್ಕೆ ಯುದ್ಧವಿರಾಮ ನೀಡಲು ಸಲಹೆ ನೀಡಲಾಗಿದೆ.

ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಭಾಗವಹಿಸಿರುವ ತ್ರಿಮೂರ್ತಿಗಳಾದ ಯಡಿಯೂರಪ್ಪ, ಈಶ್ವರಪ್ಪ ಮತ್ತು ಸದಾನಂದ ಗೌಡ ಸಭೆಯ ನಂತರ ಒಟ್ಟಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. ಆದರೆ, ಅವರ ಮಾತುಗಳು ಒಂದು ಕಥೆಯನ್ನು ಹೇಳುತ್ತಿದ್ದರೆ ಮುಖದ ಭಾವ ಒನ್ನೊಂದು ಕಥೆಯನ್ನು ಹೇಳುತ್ತಿತ್ತು. ಸದಾನಂದ ಗೌಡರ ಮುಖದಲ್ಲಿ ಎಂದಿನ ನಗುವಿರಲಿಲ್ಲ. ಕಹಿ ಮರೆತಂತಿದ್ದರೂ ಸಿಹಿ ಇರಲಿಲ್ಲ.

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಇನ್ನು ಮುಂದೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಯಾರೂ ಬೆರಳು ತೋರಿಸದಂತೆ ನಡೆದುಕೊಳ್ಳುತ್ತೇವೆ. ಪಕ್ಷದ ಬಲವರ್ಧಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇವೆ ಎಂದರು. ನಂತರ ಮಾತನಾಡಿದ ಈಶ್ವರಪ್ಪ, ಪಕ್ಷ ಬಲಪಡಿಸಲು ಹಿರಿಯ ನಾಯಕರು ಕೆಲ ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಶಾಂತವಾಗಿ ಹೇಳಿದರು.

ಬಲ್ಲ ಮೂಲಗಳ ಪ್ರಕಾರ, ಕುರ್ಚಿಗಾಗಿ ಸದ್ಯಕ್ಕೆ ಗುದ್ದಾಟ ಬೇಡ. ಕೆಲಕಾಲ ಸಂಯಮದಿಂದ ಇರಿ. ನೀವೇನೂ ಒಮ್ಮೆಲೆ ನಾಯಕರಾದವರಲ್ಲ. ಸಂಘದಲ್ಲಿ ದುಡಿದು ಹಂತಹಂತವಾಗಿ ಮೇಲೆ ಬಂದು ಮುಖ್ಯಮಂತ್ರಿ ಪಟ್ಟ ಧರಿಸಿದ್ದೀರಿ. ಕಾಲ ಕೂಡಿ ಬಂದಾಗ ಎಲ್ಲವೂ ಸುಗಮವಾಗುತ್ತದೆ. ಸೂಕ್ತ ಸ್ಥಾನಮಾನ ಸಿಗುವವರೆಗೆ ತಾಳ್ಮೆಯಿಂದಿರಿ ಎಂಬ ಬುದ್ಧಿವಾದವನ್ನು ಯಡಿಯೂರಪ್ಪನವರಿಗೆ ನೀಡಲಾಗಿದೆ.

ಸಭೆಯಲ್ಲಿ ತ್ರಿಮೂರ್ತಿಗಳ ಹೊರತಾಗಿ ಕಲ್ಲಡ್ಕ ಪ್ರಭಾಕರ ಭಟ್, ಮಂಗೇಶ್ ಬೇಂಡೆ, ಸತೀಶ್, ಜಗದೀಶ್ ಶೆಟ್ಟರ್, ಎಸ್ ಸುರೇಶ್, ಶೋಭಾ ಕರಂದ್ಲಾಜೆ, ಆರ್ ಅಶೋಕ್ ಮುಂತಾದ ನಾಯಕರು ಭಾಗವಹಿಸಿದ್ದರು. ಎಲ್ಲವೂ ಸುಸೂತ್ರವಾಗಿದೆ ಎಂದು ಕಂಡುಬಂದಿದ್ದರೂ ಕೆಂಡದ ಮೇಲೆ ಬೂದಿ ಮುಚ್ಚಿದಂತೆ ಕಂಡುಬರುತ್ತಿದೆ.

English summary
Cease fire in Karnataka BJP. Warring leaders Yeddyurappa, KS Eshwarappa, Sadananda Gowda have lent an ear to the advice by the RSS leaders to bury the hatchet and work together to strengthen the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X