ಕೆಂಡದ ಮೇಲೆ ಬೂದಿ ಮುಚ್ಚಿದ ಬಿಜೆಪಿ ನಾಯಕರು
ಡಾಲರ್ಸ್ ಕಾಲನಿಯಲ್ಲಿರುವ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಅವರ ನಿವಾಸದಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಪಕ್ಷದಲ್ಲಿ ಉದ್ಭವವಾಗಿರುವ ಆಂತರಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಮುಖಂಡರು ಸಾಕಷ್ಟು ಬೆವರು ಹರಿಸಬೇಕಾಯಿತು. ಭುಗಿಲೆದ್ದಿರುವ ದಾಯಾದಿ ಕಲಹಕ್ಕೆ ಯುದ್ಧವಿರಾಮ ನೀಡಲು ಸಲಹೆ ನೀಡಲಾಗಿದೆ.
ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಭಾಗವಹಿಸಿರುವ ತ್ರಿಮೂರ್ತಿಗಳಾದ ಯಡಿಯೂರಪ್ಪ, ಈಶ್ವರಪ್ಪ ಮತ್ತು ಸದಾನಂದ ಗೌಡ ಸಭೆಯ ನಂತರ ಒಟ್ಟಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. ಆದರೆ, ಅವರ ಮಾತುಗಳು ಒಂದು ಕಥೆಯನ್ನು ಹೇಳುತ್ತಿದ್ದರೆ ಮುಖದ ಭಾವ ಒನ್ನೊಂದು ಕಥೆಯನ್ನು ಹೇಳುತ್ತಿತ್ತು. ಸದಾನಂದ ಗೌಡರ ಮುಖದಲ್ಲಿ ಎಂದಿನ ನಗುವಿರಲಿಲ್ಲ. ಕಹಿ ಮರೆತಂತಿದ್ದರೂ ಸಿಹಿ ಇರಲಿಲ್ಲ.
ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಇನ್ನು ಮುಂದೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಯಾರೂ ಬೆರಳು ತೋರಿಸದಂತೆ ನಡೆದುಕೊಳ್ಳುತ್ತೇವೆ. ಪಕ್ಷದ ಬಲವರ್ಧಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇವೆ ಎಂದರು. ನಂತರ ಮಾತನಾಡಿದ ಈಶ್ವರಪ್ಪ, ಪಕ್ಷ ಬಲಪಡಿಸಲು ಹಿರಿಯ ನಾಯಕರು ಕೆಲ ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಶಾಂತವಾಗಿ ಹೇಳಿದರು.
ಬಲ್ಲ ಮೂಲಗಳ ಪ್ರಕಾರ, ಕುರ್ಚಿಗಾಗಿ ಸದ್ಯಕ್ಕೆ ಗುದ್ದಾಟ ಬೇಡ. ಕೆಲಕಾಲ ಸಂಯಮದಿಂದ ಇರಿ. ನೀವೇನೂ ಒಮ್ಮೆಲೆ ನಾಯಕರಾದವರಲ್ಲ. ಸಂಘದಲ್ಲಿ ದುಡಿದು ಹಂತಹಂತವಾಗಿ ಮೇಲೆ ಬಂದು ಮುಖ್ಯಮಂತ್ರಿ ಪಟ್ಟ ಧರಿಸಿದ್ದೀರಿ. ಕಾಲ ಕೂಡಿ ಬಂದಾಗ ಎಲ್ಲವೂ ಸುಗಮವಾಗುತ್ತದೆ. ಸೂಕ್ತ ಸ್ಥಾನಮಾನ ಸಿಗುವವರೆಗೆ ತಾಳ್ಮೆಯಿಂದಿರಿ ಎಂಬ ಬುದ್ಧಿವಾದವನ್ನು ಯಡಿಯೂರಪ್ಪನವರಿಗೆ ನೀಡಲಾಗಿದೆ.
ಸಭೆಯಲ್ಲಿ ತ್ರಿಮೂರ್ತಿಗಳ ಹೊರತಾಗಿ ಕಲ್ಲಡ್ಕ ಪ್ರಭಾಕರ ಭಟ್, ಮಂಗೇಶ್ ಬೇಂಡೆ, ಸತೀಶ್, ಜಗದೀಶ್ ಶೆಟ್ಟರ್, ಎಸ್ ಸುರೇಶ್, ಶೋಭಾ ಕರಂದ್ಲಾಜೆ, ಆರ್ ಅಶೋಕ್ ಮುಂತಾದ ನಾಯಕರು ಭಾಗವಹಿಸಿದ್ದರು. ಎಲ್ಲವೂ ಸುಸೂತ್ರವಾಗಿದೆ ಎಂದು ಕಂಡುಬಂದಿದ್ದರೂ ಕೆಂಡದ ಮೇಲೆ ಬೂದಿ ಮುಚ್ಚಿದಂತೆ ಕಂಡುಬರುತ್ತಿದೆ.