ಪ್ರಾಣ ಪಣಕ್ಕಿಟ್ಟು ಹೋರಾಡಿದ ಸೈನಿಕನ ಕಥೆ ವ್ಯಥೆ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ನಿವೃತ್ತ ಸೈನಿಕ ಮಲ್ಲಣ್ಣ ಶರಡ್ಡಿ ಸುಮಾರು 17 ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರ, ಡೆಹರಾಡೂನ್, ಹೈದರಾಬಾದ್ ಹಾಗೂ ಪಂಜಾಬ್ ಸೇರಿದಂತೆ ದೇಶದ ವಿವಿದ ಕಡೆ ಸೇನೆಯಲ್ಲಿ ಸೇವೆ ಸಲ್ಲಿಸಿ 2001ರಲ್ಲಿ ನಿವೃತ್ತಿಯಾಗಿದ್ದಾರೆ. ನಿವೃತ್ತಿಯ ನಿಯಮಾವಳಿ ಪ್ರಕಾರ ಮಲ್ಲಣ್ಣನಿಗೆ 1 ಹೆಕ್ಟೇರ್ ಭೂಮಿ ನೀಡಬೇಕಾಗಿತ್ತು. ಆದರೆ ಸರಕಾರದ ದಿವ್ಯ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಅಸಡ್ಡೆತನದಿಂದಾಗಿ ಭೂಮಿಗಾಗಿ ಮಾಜಿ ಸೈನಿಕ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾನೆ.
ಸೌಲಭ್ಯ ಕೊಡಿಸುವಂತೆ ಉಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾನೆ. ಗುಲಬರ್ಗಾ ವಿಭಾಗೀಯ ಪೀಠ ಮೂರು ತಿಂಗಳ ಒಳಗಾಗಿ ಮಲ್ಲಣ್ಣ ಶರಡ್ಡಿಗೆ ಭೂಮಿ ನೀಡುವಂತೆ ಯಾದಗಿರಿ ಜಿಲ್ಲಾಧಿಕಾರಿಗೆ ಆದೇಶ ನೀಡಿದೆ. ಆಗ ಎಚ್ಚೆತ್ತ ಜಿಲ್ಲಾಡಳಿತ ಮತ್ತೆ ಕಿರಿಕ್ ಶುರುಮಾಡಿದೆ 1 ಹೆಕ್ಟೇರ್ ಬದಲಿಗೆ 2.19 ಎಕರೆ ಭೂಮಿಯನ್ನು ನವೆಂಬರ್ 2011ರಲ್ಲಿ ಮಂಜೂರು ಮಾಡಿದೆ. ಈ ಭೂಮಿಯೂ ಕಲ್ಲು ಬಂಡೆಗಳಿಂದ ಕೂಡಿದ ಗುಡ್ಡದ ಪ್ರದೇಶವಾಗಿದ್ದು, ಕೃಷಿಗೆ ಅಯೋಗ್ಯವಾಗಿದೆ ಎನ್ನುವುದು ಮಾಜಿ ಸೈನಿಕನ ಅಳಲು.
ಮಾಜಿ ಸೈನಿಕ ಕೊಟಾದಡಿ ನೀಡಲಾಗಿರುವ ಭೂಮಿ ಅದನ್ನು ವಾಪಸ್ ಪಡೆದುಕೊಂಡು ಬೇರೆ ಭೂಮಿಯನ್ನು ಮಂಜೂರು ಮಾಡಿ ಎನ್ನುವ ಬೇಡಿಕೆಯೊಂದಿಗೆ ಮಲ್ಲಣ್ಣ ಜಿಲ್ಲಾಧಿಕಾರಿಗಳ ಕಛೇರಿಯನ್ನು ಈ ಹಿಂದೆ ಹಲವಾರು ಬಾರಿ ಸಂಪರ್ಕಿಸಿದ್ದರು. ಕಳೆದ ಡಿಸೆಂಬರ್ 12ರಂದು ಅಪರ ಜಿಲ್ಲಾಧಿಕಾರಿಗಳು ಭೂಮಿಯ ಕುರಿತಂತೆ ಸಮಸ್ಯೆ ಬಗೆಹರಿಸುವುದಾಗಿ ಡಿ. 31ರವರೆಗೆ ಕಾಲಾವಕಾಶ ಕೇಳಿದ್ದರು. ತನ್ನ ಬೇಡಿಕೆ ಈಡೇರಿಸಿಲ್ಲದ ಕಾರಣ ಮಂಗಳವಾರದಿಂದ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಧರಣಿ ನಡೆಸಿದ್ದಾರೆ. ಜನವರಿ 9ರವರೆಗೆ ಧರಣಿ ನಡೆಸುವ ಮಲ್ಲಣ್ಣ ಅಲ್ಲಿಯವರೆಗೂ ತಮ್ಮ ಬೇಡಿಕೆ ಈಡೇರದಿದ್ದರೆ ಜನವರಿ 10ರ ನಂತರ ರಾಜಭವನದ ಮುಂದೆ ಧರಣಿ ಕೂಡುವುದಾಗಿ ಹೇಳುತ್ತಾರೆ.
ಗುಲಬರ್ಗಾದಿಂದ ಯಾದಗಿರಿ ಪ್ರತ್ಯೇಕ ಜಿಲ್ಲೆಯಾಗಿ ಬೇರ್ಪಟ್ಟ ನಂತರ ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ಆದರೆ ಈ ಮಾಜಿ ಸೈನಿಕನ ಸಮಸ್ಯೆ ಮಾತ್ರ ಹಾಗೇ ಇದೆ. ಈಗ ತನಗೆ ಕೊಡಬೇಕಾಗಿದ್ದ ಉಳಿದ ಭೂಮಿಗಾಗಿ ಮಲ್ಲಣ್ಣ ಮತ್ತೆ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಧರಣಿ ನಡೆಸಿದ್ದು ಸರಕಾರ ಈ ಕೂಡಲೇ ತನಗೆ ನ್ಯಾಯ ಒದಗಿಸಬೇಕು ಅಂತಾನೆ. ಒಮ್ಮೆ ಮಂಜೂರಾದ ಭೂಮಿಯನ್ನು ಮತ್ತೆ ಯಾವುದೇ ಕಾರಣಕ್ಕೆ ವಾಪಸ್ ಪಡೆದುಕೊಳ್ಳಲಾಗದು ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ ಇದರಿಂದ ಈ ಸಮಸ್ಯೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.
ಬಹುರಾಷ್ಟ್ರೀಯ ಕಂಪನಿಗಳಿಗೆ ರೆಡ್ ಕಾರ್ಪೆಟ್ ಹಾಸಿ ಸಾವಿರಾರು ಎಕೆರೆ ಭೂಮಿ ನೀಡುವ ಸರ್ಕಾರ ತನ್ನದೇ ಸೈನಿಕರಿಗೆ ಹೀಗೆ ಸತಾಯಿಸುತ್ತಿರುವುದನ್ನು ನೋಡಿದ ಯುವ ಜನತೆ ಸೈನ್ಯ ಸೇರಲು ಅದ್ಹೇಗೆ ಮುಂದೆ ಬಂದಾರೂ? ದಪ್ಪ ಚರ್ಮದ ಅಧಿಕಾರಿಗಳಿಗೆ ಮಾಜಿ ಸೈನಿಕನ ಕಷ್ಟ ಅರಿವಾದೀತೇ?












Click it and Unblock the Notifications