ಲೋಕಪಾಲ ತನಿಖಾ ವ್ಯಾಪ್ತಿಗೆ ಪ್ರಧಾನಿ ಸೇರ್ಪಡೆ*

ಲೋಕಪಾಲ ಕರಡು ಮಸೂದೆ ಬಗ್ಗೆ ಚರ್ಚಿಸಲು ಸರಕಾರ ಬುಧವಾರ ಸರ್ವ ಪಕ್ಷಗಳ ಸಭೆ ಆಯೋಜಿಸಿದೆ. ಈ ಮಧ್ಯೆ, ಸಿಬಿಐ ಸಂಸ್ಥೆಯನ್ನು ಲೋಕಪಾಲ ತನಿಖಾ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವೇ ಇಲ್ಲ ಎಂದು ಸರಕಾರ ಸ್ಪಷ್ಟವಾಗಿ ತಿಳಿಸಿದೆ.
ಇದೇ ವೇಳೆ ಡಿ. 20ರಂದು ಲೋಕಸಭೆಯಲ್ಲಿ ಲೋಕಪಾಲ ಕರಡು ಮಸೂದೆ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಸಂಸದೀಯ ಖಾತೆ ಸಚಿವ ಪವನ್ ಕುಮಾರ್ ಬನ್ಸಲ್ ತಿಳಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ತರಾತುರಿಯಲ್ಲಿ, ಹೆಚ್ಚಿನ ವಿವಾದಕ್ಕೆ ಅವಕಾಶ ನೀಡದೆ ಮಸೂದೆ ಅಂಗೀಕಾರಕ್ಕೆ ತಂತ್ರ ರೂಪಿಸಿದೆ ಎನ್ನಲಾಗಿದೆ.
ಲೋಕಪಾಲಕ್ಕೆ ಶಿಫಾರಸ್ಸು ನೀಡಿದ್ದ ಸಂಸದೀಯ ಸ್ಥಾಯಿ ಸಮಿತಿ ಪ್ರಧಾನಿ ಸೇರ್ಪಡೆ ಸಂಬಂಧ ಮೂರು ಸಲಹೆಗಳನ್ನು ಮುಂದಿಟ್ಟಿತ್ತು. ಇವುಗಳಿಗೆ ಕಾಂಗ್ರೆಸ್ನ ಹಿರಿಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವ ಪವನ ಕುಮಾರ್ ಬನ್ಸಲ್ ಸುಳಿವು ನೀಡಿದ್ದಾರೆ.
ಇದಲ್ಲದೆ ಗ್ರೂಪ್ ಸಿ ಮತ್ತು ಡಿ ನೌಕರರನ್ನೂ ಲೋಕಪಾಲ ವ್ಯಾಪ್ತಿಗೆ ಒಳಪಡಿಸುವ ಮೂಲಕ ಉಳಿದ ಬೇಡಿಕೆಗಳ ಕಾವನ್ನು ಇಳಿಸುವ ಯತ್ನವನ್ನೂ ಕಾಂಗ್ರೆಸ್ ನೇತೃತ್ವದ ಯುಪಿಎ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.












Click it and Unblock the Notifications