ತಮಿಳು ಮಲೆಯಾಳಿ ದಾಯಾದಿ ಕಲಹ ಉಲ್ಬಣ

ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿದ್ದು ಕುಂಭಂ - ಮೆಟ್ಟೂರು ರಸ್ತೆಯ ನಡುವೆ ಸಂಚಾರ ಸತತ ಮೂರನೇ ದಿನವೂ ಸ್ಥಗಿತಗೊಂಡಿದೆ. ಎರಡೂ ರಾಜ್ಯಗಳ ನಡುವಣ ಅಂತರರಾಜ್ಯ ಬಸ್ ವ್ಯವಸ್ಥೆ ಸ್ಥಗಿತಗೊಂಡಿದೆ. 116 ವರ್ಷಗಳಷ್ಟು ಹಳೆಯದಾದ ಈ ಆಣೆಕಟ್ಟು ಸ್ಪೋಟಗೊಳ್ಳಲಿದೆ ಎನ್ನುವ ಗಾಳಿಸುದ್ದಿ ಎರಡೂ ರಾಜ್ಯದ ಜನರ ನೆಮ್ಮದಿ ಕೆಡಿಸಿದೆ.
ಇದೇ ವೇಳೆ, ಕೇರಳ ರಾಜ್ಯದಲ್ಲೂ ತಮಿಳಿರ ಮೇಲೆ ಹಲ್ಲೆ ನಡೆಯುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ತಮಿಳುನಾಡಿನಲ್ಲಿ ಪ್ರಮುಖ ವಿರೋಧ ಪಕ್ಷವಾದ ಡಿಎಂಕೆ ಮಾನವ ಸರಪಳಿ, ಉಪವಾಸ ಸತ್ಯಾಗ್ರಹ ನಡೆಸುತ್ತಿದೆ. ಆದರೆ ಇದುವರೆಗೆ ಮುಖ್ಯಮಂತ್ರಿ ಜಯಲಲಿತಾ ಅವರಿಂದ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.
ಮುಖ್ಯವಾಗಿ ಈ ಅಣೆಕಟ್ಟಿನ ಲಾಭ ಪಡೆಯುತ್ತಿರುವ ದಕ್ಷಿಣ ತಮಿಳುನಾಡಿನ ಥೇಣಿ, ಮದುರೈ, ಶಿವಗಂಗೆ, ರಾಮನಾಥಪುರ ಜಿಲ್ಲೆಗಳಲ್ಲಿ ಕಂಡ ಕಂಡಲ್ಲಿ ಮಲೆಯಾಳಿಗಳ ಮೇಲೆ ಹಲ್ಲೆ ನಡೆಸಲಾಗುತ್ತಿದ್ದು, ಬೇಕರಿ, ಟೀ ಅಂಗಡಿಗಳನ್ನು ಖಾಲಿ ಮಾಡಿಸಲಾಗುತ್ತಿದೆ.
ಕೇರಳ ಮೂಲದ ಮಣಪ್ಪುರಂ ಸಂಸ್ಥೆ, ಜೋಸ್ ಅಲುಕಾಸ್ ಮುಂತಾದ ಸಂಸ್ಥೆಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಕೂಡ ವರದಿಯಾಗಿದೆ. ಚೆನ್ನೈ ನಲ್ಲೂ ಮಲೆಯಾಳಿಗಳ ಮೇಲೆ ಹಿಂಸಾಚಾರ ನಡೆಯುತ್ತಿರುವ ಬಗ್ಗೆ ಸುದ್ದಿ ಬರುತ್ತಿದೆ.
ಈ ಆಣೆಕಟ್ಟು ವಿವಾದ ಯಾವ ಮಟ್ಟಿಗೆ ಎರಡು ಭಾಷೆಗಳ ನಡುವೆ ಕಂದಕ ಸೃಷ್ಟಿಸಿದೆ ಅಂದರೆ ಕೇರಳ ಮೂಲದ ಯಾವುದೇ ನಟ ನಟಿಯರಿಗೆ ತಮಿಳು ಚಿತ್ರದಲ್ಲಿ ಅವಕಾಶ ನೀಡಬಾರದೆಂದು ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.












Click it and Unblock the Notifications