ಕನ್ನಡ ಸವಿ ಉಣ್ಣಲು ಬಂದ ಕನ್ನಡಿಗರಿಗೆ ಲಾಠಿ ರುಚಿ
ಕನ್ನಡ ಶಾಲೆಗಳನ್ನು ಮುಚ್ಚಬೇಕೆಂಬ ಸರಕಾರದ ನಿರ್ಧಾರವನ್ನು ವಿರೋಧಿಸಿ ನಾನಾ ಕನ್ನಡಪರ ಸಂಘಟನೆಗಳು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದವು. ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಉತ್ಸವವನ್ನು ಉದ್ಘಾಟಿಸುವ ಮುನ್ನ ಈ ಘಟನೆ ನಡೆದಿದೆ. ಪರಿಸ್ಥಿತಿ ಕೈಮೀರಿ ಹೋಗುವುದೆಂಬ ಅರಿವು ಬರುತ್ತಿದ್ದಂತೆ ಪೊಲೀಸರು ಲಾಠಿ ಬೀಸಲು ಪ್ರಾರಂಭಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಲ್ಲೂರು ಪ್ರಸಾದ್ ಅವರು ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಈ ಅಹಿತಕರ ಘಟನೆ ಜರುಗಿದೆ. ಭಾಷಣ ಶುರುವಾಗುತ್ತಿದ್ದಂತೆ ಸರಕಾರದ ವಿರುದ್ಧ ಕೆಲ ಸಂಘಟನೆಗಳು ಧಿಕ್ಕಾರ ಕೂಗಲು ಪ್ರಾರಂಭಿಸಿದವು. ಆಗ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಜನರನ್ನು ಸಂಯಮದಿಂದ ಇರಬೇಕೆಂದು ಮನವಿ ಮಾಡಿದರು.
ಅದನ್ನು ಕಿವಿಗೆ ಹಾಕಿಕೊಳ್ಳಲು ಜನತೆ ಸಿದ್ಧವಿರಲಿಲ್ಲ. ಕನ್ನಡ ಶಾಲೆ ಮಚ್ಚುವ ನಿರ್ಧಾರವನ್ನು ಸರಕಾರ ಹಿಂದಕ್ಕೆ ತೆಗೆದುಕೊಳ್ಳುವತನಕ ತಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಪರಿಸ್ಥಿತಿಯನ್ನು ಹದ್ದುಬಸ್ತಿಗೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು. ಅನೇಕ ಕನ್ನಡ ಹೋರಾಟಗಾರರ ತಲೆಯಿಂದ ನೆತ್ತರ ಸುರಿಯುತ್ತಿದ್ದಂತೆ ಧಿಕ್ಕಾರಗಳು ಮುಗಿಲು ಮುಟ್ಟಿದವು. ಪೊಲೀಸರು 33 ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.