ಮೈಸೂರು ವಿವಿಯಿಂದ 400 ವಿದ್ಯಾರ್ಥಿನಿಯರು ನಾಪತ್ತೆ
ಈ ಬಗ್ಗೆ ಅರಿವು ಮೂಡಿಸಲು ಪೋಷಕರು ವಿಫಲರಾಗಿದ್ದಾರೆ. ಸಂಶೋಧನೆಯ ಪ್ರಕಾರ ಪೋಷಕರ ಅತಿಯಾದ ಪ್ರೋತ್ಸಾಹ ಹಾಗೂ ಜೀವನ ಶೈಲಿ ಹೆಣ್ಣು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ಜತೆ ಪೋಷಕರಿಗೂ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸುವ ಜರೂರತ್ತು ಇದೆ.
ವರ್ಷದಿಂದ ವರ್ಷಕ್ಕೆ ಕಾಣೆಯಾಗುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಿದ್ದು, ಇವರಲ್ಲಿ ಪತ್ತೆಯಾದವರ ಸಂಖ್ಯೆ ಕೇವಲ ಬೆರಳೆಣಿಕೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಹೇಳಿದ್ದಾರೆ.
ಮಹಿಳಾ ಪರ ಚಿಂತನೆ ಹಾಗೂ ಕಾರ್ಯಕ್ರಮಗಳ ಅಭಿವೃದ್ಧಿಯಲ್ಲಿ ಮೈಸೂರು ಜಿಲ್ಲೆ ಸಮತೋಲನ ಬೆಳವಣಿಗೆ ಹೊಂದಿದೆ. ಆದರೆ, ಮಹಿಳೆಯರ ಅದರಲ್ಲೂ 15ರಿಂದ 22 ವರ್ಷದೊಳಗಿನ ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣಗಳು ಯಥೇಚ್ಛವಾಗಿ ಜಿಲ್ಲೆಯಲ್ಲಿ ವರದಿಯಾಗಿರುವುದು ಆತಂಕದ ಸಂಗತಿ ಎಂದು ಹೇಳಿದರು.
ವಿದ್ಯಾರ್ಥಿನಿಯರು ಕಾಣೆಯಾಗುತ್ತಿರುವ ಕುರಿತು ಮಹಿಳಾ ಆಯೋಗ ವಿವಿಯ ಆಡಳಿತ ಮಂಡಳಿಗೆ ಸೂಕ್ತ ನಿರ್ದೇಶನ ನೀಡಿದ್ದರೂ ಪ್ರಯೋಜನವಾಗಿಲ್ಲ. ದೇಶದ ಇತರೆ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ನಾಪತ್ತೆ ಪ್ರಕರಣಗಳು ಮೈಸೂರು ವಿವಿಯಲ್ಲಿ ಹೆಚ್ಚು ವರದಿಯಾಗುತ್ತಿವೆ ಎಂದು ಅವರು ಆತಂಕ ಪಟ್ಟಿದ್ದಾರೆ.
ಜಾಗೃತಿ ಕಾರ್ಯಕ್ರಮ ಕಡ್ಡಾಯ... ನಾಪತ್ತೆ ಪ್ರಕರಣಗಳ ಉಲ್ಬಣಕ್ಕೆ ಕಾರಣ ಹುಡುಕಿ, ಅವುಗಳನ್ನು ನಿಯಂತ್ರಿಸುವ ಹಾಗೂ ಆ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲು ಮಹಿಳಾ ಆಯೋಗ ಚಿಂತಿಸಿದೆ ಎಂದು ಹೇಳಿದರು.