ಕಿಂಗ್ ಪಟ್ಟ ಕಳಚಿದ ಗಾಲಿ ರೆಡ್ಡಿ ಈಗ ಕಿಂಗ್ ಮೇಕರ್
ನಾಂಪಲ್ಲಿ ಸಿಬಿಐ ನ್ಯಾಯಾಲಯ ಮಾತ್ರ ಜಾಮೀನು ನೀಡಲು ನಿರಾಕರಿಸುತ್ತಲೇ ಬಂದಿರುವುದು ಗಾಲಿ ರೆಡ್ಡಿಗೆ ಹಿನ್ನೆಡೆಯಾದರೂ ಸಿಬಿಐ ವಶಕ್ಕೆ ನೀಡಿಲ್ಲವಲ್ಲ ಎಂಬ ಸಮಾಧಾನವಿದೆ.
ಒಂದು ಮೂಲಗಳ ಪ್ರಕಾರ ಕರ್ನಾಟಕದಲ್ಲಿ ವೈಎಸ್ ಜಗನ್ ಪಕ್ಷ ಸ್ಥಾಪನೆಯಾದರೂ ಗಾಲಿ ಜನಾರ್ದನ ರೆಡ್ಡಿ ಅಧ್ಯಕ್ಷ ಸ್ಥಾನಕ್ಕೇರುವುದಿಲ್ಲವಂತೆ. ಸಕ್ರಿಯ ರಾಜಕೀಯಕ್ಕೆ ಗುಡ್ ಬೈ ಹೇಳಲು ಸಿದ್ದತೆ ನಡೆಸಿರುವ ಜನಾರ್ದನ ರೆಡ್ಡಿ, ಮುಂದಿನ ಯೋಜನೆಗಳ ಬಗ್ಗೆ ಪ್ರತಿ ದಿನ ನೋಟ್ಸ್ ಮಾಡಿಕೊಳ್ಳುತ್ತಿದ್ದಾರಂತೆ.
ರೆಡ್ಡಿ ಮುಂದಿನ ಯೋಜನೆಯಂತೆ, ಜನಾನುರಾಗಿ ಬಿ ಶ್ರೀರಾಮುಲುವನ್ನು ರಾಜಕೀಯವಾಗಿ ಬೆಳಸುವುದು, ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳೊಡನೆ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಕಿಂಗ್ ಮೇಕರ್ ಆಗಿ ಬೆಳೆಯಬೇಕು ಎಂದುಕೊಂಡಿದ್ದಾರೆ.
ಬಿಜೆಪಿಗೆ ಗುಡ್ ಬೈ: ಜೈಲಿನಿಂದ ಹೊರಬಂದರೂ ಶ್ರೀರಾಮುಲುಗೆ ಆದ ಗತಿಯೇ ತನಗೂ ಆಗುತ್ತದೆ ಎಂಬಅರಿವು ಗಾಲಿ ರೆಡ್ಡಿಗೆ ಆಗಿದೆ. ಹಾಗಾಗಿ ಬಿಜೆಪಿ ಸಖ್ಯವನ್ನು ಸಂಪೂರ್ಣ ತೊರೆಯುವ ಸಾಧ್ಯತೆ ನಿಚ್ಚಳವಾಗಿದೆ. ಗಾಲಿ ಹೋದ ಹಾದಿಯಲ್ಲೇ ಕರುಣಾಕರ, ಸೋಮಶೇಖರ ಸಾಗಲಿದ್ದಾರೆ. ಬಳ್ಳಾರಿ ಚುನಾವಣೆಯಲ್ಲಿ ಶ್ರೀರಾಮುಲು ಗೆದ್ದರೆ ಹೊಸ ಪಕ್ಷ ಉದಯವಾಗಲಿದೆ.
ಬಳ್ಳಾರಿ ಚುನಾವಣೆಯಲ್ಲಿ ಶ್ರೀರಾಮುಲು ಸೋಲು ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳದ ಗಾಲಿ ರೆಡ್ಡಿ, ಜೆಡಿಎಸ್ ನ ಹಿರಿತಲೆ ದೇವೇಗೌಡರು ರಾಜಕೀಯವಾಗಿ ಬೆಳೆದ ರೀತಿಯನ್ನು ರೆಡ್ಡಿ ಅಭ್ಯಸಿಸುತ್ತಿದ್ದಾರೆ ಎಂಬ ಸುದ್ದಿಯಿದೆ. ಯಡಿಯೂರಪ್ಪ ಅವರ ಪ್ರಾಬಲ್ಯ ಮುರಿಯಬೇಕಾದರೆ ಗೌಡರಂತೆ ಕಿಂಗ್ ಮೇಕರ್ ಆದರೆ ಮಾತ್ರ ಸಾಧ್ಯ ಎಂಬ ಅರಿವು ರೆಡ್ಡಿಗೆ ತಡವಾಗಿ ತಿಳಿಯುತ್ತಿದೆ.