ಬಿಬಿಎಂಪಿ ಕಚೇರಿಯಲ್ಲಿ ಭಾರೀ ಅಗ್ನಿ ಅನಾಹುತ, ದಾಖಲೆ ಭಸ್ಮ
ಶನಿವಾರ ಸಂಜೆ ಹೊತ್ತಿಗೆ ಬಿಬಿಎಂಪಿ ಕಚೇರಿಯ ಅನೆಕ್ಸ್ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿ 1539 ಕೋಟಿ ರು. ಭ್ರಷ್ಟಾಚಾರ ಹಗರಣದ ದಾಖಲೆಗಳನ್ನು ಕೂಡಿಡಲಾಗಿತ್ತು. ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರು ಕೂಡಲೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಬೆಂಕಿಯ ಜ್ವಾಲೆ ಯಾವ ರೀತಿ ಪಸರಿಸಿತ್ತೆಂದರೆ ಅಗ್ನಿ ಅನಾಹುತ ಸಂಭವಿಸಿ ಅರ್ಧ ಗಂಟೆಯ ನಂತರ ಬೆಂಕಿಯನ್ನು ತಹಬದಿಗೆ ತರಲು ಅಗ್ನಿಶಾಮಕ ದಳದವರಿಗೆ ಸಾಧ್ಯವಾಯಿತು. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತರಲು ಹರಸಾಹಸ ಪಡಬೇಕಾಯಿತು.
ಸಿದ್ದಯ್ಯ ಅವರ ಪ್ರಕಾರ, "ಮಹತ್ವದ ದಾಖಲೆಗಳನ್ನು ಸರ್ವನಾಶ ಮಾಡಲೆಂದೇ ವ್ಯವಸ್ಥಿತ ಸಂಚು ಮಾಡಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದು ಶಾರ್ಟ್ ಸರ್ಕಿಟ್ ನಿಂದ ಆದ ಅನಾಹುತವಲ್ಲ. ಬೇಕೆಂತಲೇ ಯಾರೋ ಮಾಡಿರುವ ಕೃತ್ಯ. ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದರು.
ಸಿದ್ದಯ್ಯ ಮತ್ತೆ ಹೇಳುವುದೇನೆಂದರೆ, ಮೂರನೇ ಮಹಡಿಯಲ್ಲಿ ಊಹಿಸಿದಂತೆ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟಿರಲಿಲ್ಲ. ಅವೆಲ್ಲ ಕೆಳಮಹಡಿಯಲ್ಲಿವೆ ಮತ್ತು ಸುರಕ್ಷಿತವಾಗಿವೆ. ಸುಟ್ಟಿರುವವು ದೈನಂದಿನ ಚಟುವಟಿಕೆಗೆ ಸಂಬಂಧಿಸಿದ ದಾಖಲೆಗಳು ಮಾತ್ರ.
ಇಷ್ಟೆಲ್ಲ ಮಹತ್ವದ ದಾಖಲೆಗಳು ಅಲ್ಲಿದ್ದರೂ ಭದ್ರತಾ ನ್ಯೂನತೆ ಕಂಡುಬಂದಿರುವುದನ್ನು ಅವರು ಒಪ್ಪುತ್ತಾರೆ. ಒಳಗಿನವರೇ ಈ ಕೆಲಸ ಮಾಡಿರಬಹುದೆ ಎಂಬ ಪ್ರಶ್ನೆಯೂ ಈಗ ಕಾಡುತ್ತಿದೆ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಿಬಿಎಂಪಿ ಎಚ್ಚೆತ್ತುಕೊಂಡಂತಾಗಿದೆ.