ಗಾಲಿ ರೆಡ್ಡಿ ಜೈಲಿನಿಂದ ಬಂದ್ಮೇಲೆ ವೈಎಸ್ ಆರ್ ಪಕ್ಷದ ಹೆಡ್
ರೆಡ್ಡಿ-ಜಗನ್ ಯೋಜನೆಗಳು, ಕಾರ್ಯತಂತ್ರಗಳು ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಬಿಜೆಪಿಗೆ ಶ್ರೀರಾಮುಲು ಶರಣು ಹೊಡೆಯುವುದು, ಬಿಜೆಪಿ ರಾಮುಲು ಹಿಂದೆ ಬಿದ್ದು ಗೋಗರೆಯುವುದು. ಬಳ್ಳಾರಿಯಲ್ಲಿ ರೆಡ್ಡಿ ಬಳಗದ ಶಕ್ತಿ ಕುಂದಿದೆ ಎಂದು ಮೇಲ್ನೋಟಕ್ಕೆ ತೋರಿಸುವುದು ಕೊನೆಗೆ ಬಿಜೆಪಿ ಹಂಗಿಲ್ಲದೆ ಮೇಲೆದ್ದು ಬರುವುದು ಇದು ಸದ್ಯದ ಪ್ಲ್ಯಾನ್
ಶ್ರೀರಾಮುಲು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಚಿನ್ಹೆಯನ್ನೇ ತಾನು ಬಳಸಿಕೊಂಡಿರುವುದು ಜಗನ್ ನಂಟಿನ ಸೂಚನೆ ನೀಡುತ್ತಿದೆ.
ಕಡಪ, ಪುಲಿವೆಂದುಲ ಅಸೆಂಬ್ಲಿಗೆ ಫ್ಯಾನ್ ಚಿನ್ಹೆಯನ್ನು ಬಳಸಿಕೊಂಡು ಸ್ಪರ್ಧಿಸಿದ್ದ ವೈಎಸ್ ಆರ್ ಕಾಂಗ್ರೆಸ್ ಪಕ್ಷ, ಫ್ಯಾನ್ ಚಿನ್ಹೆಯನ್ನು ಮುಂದುವರೆಸಿಕೊಂಡು ಹೋಗುವ ಸೂಚನೆ ಇದೆ.
ಈ ನಡುವೆ ಜನಾರ್ದನ ರೆಡ್ಡಿ ಜೈಲಿನಲ್ಲಿ ವಿವಿಐಪಿ ಸ್ಥಾನ ದೊರೆತ ಮೇಲೆ ಆರಾಮವಾಗಿ ಕೂತು ಮುಂದಿನ ಕಾರ್ಯತಂತ್ರದ ಬಗ್ಗೆ ಸ್ಕೆಚ್ ಹಾಕುತ್ತಿದ್ದಾರೆ. ಗಾಲಿ ರೆಡ್ಡಿ ಶ್ರೀರಾಮುಲು ಕಿವಿಯಲ್ಲಿ ಹೇಳಿದ ವಿಷ್ಯ ಹೀಗಿದೆ.
'ಜೈಲಿನಿಂದ ಹೊರ ಬಿದ್ದ ಮೇಲೆ ಕರ್ನಾಟಕದಲ್ಲಿ ತಮ್ಮ ಗಾಡ್ ಫಾದರ್ ವೈಎಸ್ ರಾಜಶೇಖರ್ ರೆಡ್ಡಿ ಹೆಸರಿನ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಲಾಗುತ್ತದೆ. ಕರ್ನಾಟಕದಲ್ಲಿ ವೈಎಸ್ ಆರ್ ಪಕ್ಷ ಸ್ಥಾಪಿಸಲು ಕಷ್ಟ ಏನು ಆಗುವುದಿಲ್ಲ. ಅದು ಈಗ ರಾಷ್ಟ್ರೀಯ ಪಕ್ಷವಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿರುವ ವೈಎಸ್ ಜಗನ್ ಆಸ್ತಿ ನೋಡಿಕೊಳ್ಳುವ ಜವಾಬ್ದಾರಿ ನಮಗೆ ವಹಿಸಲಾಗಿದೆ. ಅದರ ಲಾಭವನ್ನು ಪಾರ್ಟಿ ಫಂಡ್ ಆಗಿ ಬಳಸಬಹುದಾಗಿದೆ. ನಾನು ಬರುವವರೆಗೂ ನೀನು ತಾಳ್ಮೆಯಿಂದ ನಮ್ಮವರನ್ನು ಕಾಯ್ದುಕೊಂಡಿರು' ಎಂದು ರಾಮುಲುಗೆ ರೆಡ್ಡಿ ಕಿವಿಮಾತು ಹೇಳಿದ್ದರಂತೆ. ಈಗ ವೈಎಸ್ ಆರ್ ಕಾಂಗ್ರೆಸ್ ಕರ್ನಾಟಕದ ಅಧ್ಯಕ್ಷ ಪಟ್ಟದ ಸಿಂಹಾಸನ ಏರಿದ ಕನಸು ಕಾಣುತ್ತಿದ್ದಾರೆ ಗಾಲಿ ರೆಡ್ಡಿ.