ಹೆಣ್ಣಾಗಿ ಕನ್ನಿಗೇ ಇಲ್ಲದ ಜಾಮೀನು ಯಡಿಯೂರಪ್ಪಗೆ ಏಕೆ?

ಸ್ವತಃ ಯಡಿಯೂರಪ್ಪ ಅವರೇ 'ಇಲ್ಲ. ಇನ್ನು ನನಗೆ ಜಾಮೀನು ಸಿಗುವುದಿಲ್ಲ. ಜೈಲುವಾಸವೇ ಗಟ್ಟಿ' ಎಂದು ವಿಕ್ಟೋರಿಯಾ ಆಸ್ಪತ್ರೆಯಿಂದ ಎದ್ನೋ ಬಿದ್ನೋ ಎಂದು ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿರುವಾಗ ಈಗ್ಯಾಕೆ ಅವರಿಗೆ ಜಾಮೂನು ಸವಿಯುವ ಅವಕಾಶ.
ಯಡಿಯೂರಪ್ಪಗೆ ಜಾಮೀನು ಮಂಜೂರು ಮಾಡುತ್ತಾ 'ಅವರೇನು ಕೊಲೆಗಡುಕರೇ ಜಾಮೀನು ನಿರಾಕರಿಸಲು?' ಎಂದು ಘನ ನ್ಯಾಯಾಲಯ ಪ್ರಶ್ನಿಸಿದೆ. ಯಡಿಯೂರಪ್ಪ ಭೂದಾಹದಿಂದ ಭಾದಿತರಾದ ಜನಕ್ಕೆ ಇದನ್ನು ಕೇಳಿ ನಗಬೇಕೋ, ಅಳಬೇಕೋ ತಿಳಿಯದಾಗಿದೆ.
ಶುಕ್ರವಾರ ರಾಜ್ಯ ಹೈಕೋರ್ಟ್ ಎತ್ತಿದ್ದ ಈ ಪ್ರಶ್ನೆಗೆ ಅತ್ತ ದೆಹಲಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಕೆಲವೇ ಕ್ಷಣಗಳಲ್ಲಿ ಕನ್ನಿಮೋಳಿ ಪ್ರಕರಣದಲ್ಲಿ ಉತ್ತರ ನೀಡಿದೆ. ಕನ್ನಿಮೊಳಿಗೆ ಜಾಮೀನು ನಿರಾಕರಿಸಿರುವ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರು ನೀಡಿರುವ ಪ್ರತಿಕ್ರಿಯೆ ಇಂಟರೆಸ್ಟಿಂಗ್ ಆಗಿದೆ ನೋಡಿ - 'ವಿಚಾರಣಾಧೀನ ಕೈದಿಗಳಾದ ಕಾರಣ ಮತ್ತು ಈಗಾಗಲೇ ಆರೋಪಪಟ್ಟಿ ದಾಖಲಾಗಿರುವ ಕಾರಣ ಕನಿಮೋಳಿ ಮತ್ತು ಇತರರಿಗೆ ಜಾಮೀನು ನೀಡಬೇಕಿತ್ತು'. ಯಡಿಯೂರಪ್ಪಗೆ ಯಾಕೆ ಬೇಲ್ ನೀಡಬಾರದು ಎಂಬುದಕ್ಕೆ ಇದರಲ್ಲಿ ಉತ್ತರ ಅಡಗಿದೆ.
ಮೆರಿಟ್ ಆಫ್ ದಿ ಕೇಸ್ ಅನ್ನು ಪಕ್ಕಕ್ಕಿಟ್ಟು ನ್ಯಾಯಾನ್ಯಾಯದ ಬಗ್ಗೆ ತುಸು ಚರ್ಚಿಸೋಣ. ಇದು ಖಂಡಿತ ಒಂದೆರಡು ದಿನಕ್ಕೆ ಸತ್ತುಹೋಗುವ ವಿಷಯವಲ್ಲ. ನಾಲ್ಕಾರು ದಿನ ಇದರ ಸುತ್ತಲೇ ಚರ್ಚೆಗಳು ನಡೆಯಲಿವೆ. ಅದು ಉಚಿತವೂ ಸಹ. ನಿಮ್ಮ ನೆಚ್ಚಿನ 'ಕನ್ನಡ ವನ್ ಇಂಡಿಯಾ' ಇಂತಹ ಚರ್ಚೆಗೆ ಮುಕ್ತ ವೇದಿಕೆಯಾಗಲಿದೆ. ಅಂದಹಾಗೆ ಯಡಿಯೂರಪ್ಪಗೆ 18 ದಿನಗಳ ಹಿಂದೆ ಶನಿವಾರ ಕರಾಳವಾಗಿತ್ತು. ಇಂದು ಶುಭ ಶುಕ್ರವಾರ ಆಗಬಹುದೇ ನೋಡೋಣ!












Click it and Unblock the Notifications