ಆರೋಪಿ ಯಡಿಯೂರಪ್ಪ ಭೇಟಿ : ಸುತ್ತೂರು ಸ್ವಾಮೀಜಿ ಸಮರ್ಥನೆ

ಒಬ್ಬ ಆರೋಪಿಯನ್ನು ಭೇಟಿಯಾಗಲು ಸ್ವಾಮೀಜಿಗಳಿಗೇಗೆ ಧಾವಂತ ಅಂತ ಜನ ಮಾತನಾಡಿಕೊಂಡಿದ್ದರು. ಹೀಗೆ ಮಾಡಿದರೆ ವ್ಯಕ್ತಿ ಪ್ರಭಾವಶಾಲಿಯಾಗಿದ್ದರೇನಂತೆ ಅವರನ್ನು ಈ ರೀತಿ ಭೇಟಿಯಾಗುತ್ತಿದ್ದರೆ ಅವರ ತಪ್ಪನ್ನು ಸಮರ್ಥಿಸಿಕೊಂಡಂತೆ ಆಗುವುದಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿರುವ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಯಾರೇ ಆಗಲಿ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ ಸಂದರ್ಭ ಅವರ ಭೇಟಿ ಮಾಡಿ ಆರೋಗ್ಯ ವಿಚಾರಿಸುವುದು ಮತ್ತು ಅವರಿಗೆ ಧೈರ್ಯ ತುಂಬುವುದು ಕರ್ತವ್ಯ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವಿಚಾರದಲ್ಲಿ ಯಾವುದೇ ರೀತಿಯ ಅಪಾರ್ಥ ಕಲ್ಪಿಸುವುದು ಸರಿಯಲ್ಲ ಎಂದು ಹೇಳಿದ ಅವರು ಅನಾರೋಗ್ಯದಿಂದ ಬಳಲುತ್ತಿರುವವರನ್ನು ಹತ್ತಿರದಿಂದ ನೋಡಿ ಮಾತನಾಡಿಸಿ ಬರುವುದು ಸಹಜವಾಗಿರುವುದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾಗಿ ಅವರು ಸ್ಪಷ್ಟಪಡಿಸಿದರು.
ಸುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ "ಏಳುಮಲೈ" ಎಂಬ ಕನ್ನಡ ಚಿತ್ರದ ಮುಹೂರ್ತ ಕಾರ್ಯಕ್ರಮದ ಸಂದರ್ಭ ಶ್ರೀಗಳನ್ನು ಮಾಧ್ಯಮದವರು ಭೇಟಿ ಮಾಡಿ ಕೇಳಿದ ಪ್ರಶ್ನೆಗೆ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಸ್ವಾಮೀಜಿಗಳು ಆಸ್ಪತ್ರೆಗೆ ಭೇಟಿ ನೀಡಿ ಯಡಿಯೂರಪ್ಪರವರ ಆರೋಗ್ಯ ವಿಚಾರಿಸಿದ ಕೂಡಲೇ ಅವರ ತಪ್ಪನ್ನು ಸಮರ್ಥಿಸಿಕೊಂಡಂತೆ ಆಗುವುದಿಲ್ಲ. ತಪ್ಪು ಯಾರು ಮಾಡಿದರೂ ಅದು ತಪ್ಪೇ. ಭೇಟಿಯ ಸಂದರ್ಭ ಆರೋಗ್ಯ ವಿಚಾರಿಸಲಾಯಿತೇ ಹೊರತು ಬೇರೆ ಯಾವುದೇ ರೀತಿಯ ಮಾತುಕತೆಗಳಾಗಲೀ, ಚರ್ಚೆಗಳಾಗಲಿ ನಡೆದಿಲ್ಲ. ಆ ಬಗ್ಗೆ ಯಾವುದೇ ರೀತಿಯ ಅಪಾರ್ಥ ಕಲ್ಪಿಸಬಾರದೆಂದು ಹೇಳಿದರು.












Click it and Unblock the Notifications