ಲೋಕಾಯುಕ್ತ ಪೀಠ: ಬನ್ನೂರಮಠ ಅನರ್ಹ

ಲೋಕಾಯುಕ್ತ ಸ್ಥಾನಕ್ಕೆ ಅಕಳಂಕಿತರು ದೊರಕುವುದು ಇನ್ನು ದುರ್ಲಭವೇ ಎಂಬ ಹತಾಶೆ ಮಡವುಗಟ್ಟಿರುವಾಗ ನ್ಯಾ. ಬನ್ನೂರುಮಠರ ಹೆಸರನ್ನು ಸರಕಾರ ಆಖೈರು ಗೊಳಿಸಿತ್ತು. ಆದರೆ 'ಸಾವಿಲ್ಲದ ಮನೆಯಿಂದ ಸಾಸಿವೆ ತಾ' ಎಂದು ಹೇಳಿದಂತೆ ಕಳಂಕವೇ ಇಲ್ಲದ ನ್ಯಾಯಮೂರ್ತಿಗಳನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಬೇಕಾದ ಪರಿಸ್ಥಿತಿ ರಾಜ್ಯವನ್ನು ಕಾಡುತ್ತಿದೆ.
ಲೋಕಾಯುಕ್ತ ಸ್ಥಾನಕ್ಕೆ ನೇಮಕವಾಗಬೇಕಿದ್ದ ನ್ಯಾಯಮೂರ್ತಿ ಎಸ್.ಆರ್. ಬನ್ನೂರುಮಠರ ವಿರುದ್ಧ ಬಲವಾದ ಭೂಕಬಳಿಕೆ ಆರೋಪ ಕೇಳಿಬಂದಿದೆ. ನ್ಯಾ. ಶಿವರಾಜಪಾಟೀಲ್ ಅವರ ಮೇಲೆ ಬಂದಂತಹ ಆರೋಪವೇ ಈಗ ನ್ಯಾ. ಬನ್ನೂರಮಠ ಅವರನ್ನು ಕಾಡಲಾರಂಭಿಸಿದೆ. ಸದ್ಯಕ್ಕೆ ರಾಜ್ಯಪಾಲರು ಒಂದೆರಡು ದಿನ ಹೆಚ್ಚಾಗಿಯೇ ದೆಹಲಿಯಲ್ಲಿ ಉಳಿದುಕೊಳ್ಳಲಿರುವುದರಿಂದ ಸರಕಾರಕ್ಕೆ ಲೋಕಾಯುಕ್ತ ಸಂದಿಗ್ಧ ಪರಿಸ್ಥಿತಿಯಿಂದ ಹೊರಬರಲು ಒಂದಷ್ಟು ಕಾಲಾವಕಾಶ ಲಭಿಸಿದೆ ಎನ್ನಬಹುದು.
ಈ ಮಧ್ಯೆ, ಆರೋಪದ ಬಗ್ಗೆ ನಾನು ಯಾವ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನ್ಯಾ. ಬನ್ನೂರುಮಠರ ಪ್ರತಿಕ್ರಿಯಿಸಿದ್ದಾರೆ.
ಇನ್ನು, ನ್ಯಾ. ಬನ್ನೂರಮಠರ ವಿವಾದದ ಕುರಿತು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೀಗೆ ಪ್ರತಿಕ್ರಿಯೆಸಿದ್ದಾರೆ: 'ನನಗೆ ಈ ವಿಷಯ ತಿಳಿದಿಲ್ಲ. ಆರೋಪದ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸುತ್ತೇವೆ. ಸರಿಯಾದ ತನಿಖೆ ನಡೆಸಿದ ನಂತರವೇ ಲೋಕಾಯುಕ್ತರ ನೇಮಕದ ಮುಂದಿನ ಹೆಜ್ಜೆ ಇಡುತ್ತೇವೆ' ಎಂದರು.












Click it and Unblock the Notifications