ಗಣಿ ವರದಿ ಸುಳ್ಳು, ಕಾಂಗ್ರೆಸ್ ಪಿತೂರಿ ಬಿಎಎಸ್ ವೈಗೆ ಹಾನಿ

ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ತಯಾರಿಸಿದ ವರದಿಯನ್ನು ನಕಲು ಮಾಡಲಾಗಿದೆ. ದಾಖಲೆಗಳು ಎಲ್ಲಾ ವ್ಯತ್ಯಾಸವಾಗಿ ಕಾಂಗ್ರೆಸ್ ಪರ ವರದಿಯಾಗಿ ಹೋಗಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.
ಬುಧವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ರೇಣುಕಾಚಾರ್ಯ ಶ್ರೀಗಳ ಜೊತೆ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಯಡಿಯೂರಪ್ಪ ಶೀಘ್ರವೇ ನಿರ್ದೋಷಿಯಾಗಿ ಬಿಡುಗಡೆಯಾಗಲಿದ್ದಾರೆ. ಅವರು ಹೊರ ಬಂದ ಮೇಲೆ ನಮಗೆ ಹಬ್ಬ, ವಿರೋಧಿಗಳಿಗೆ ದುರ್ದೆಸೆ ಆರಂಭವಾಗಲಿದೆ.
ಎಚ್ಡಿಕೆ ಬಿಎಸ್ ವೈ ಭೇಟಿ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೈಲಿನಲ್ಲಿ ಯಡಿಯೂರಪ್ಪರನ್ನು ಭೇಟಿ ಮಾಡಿಲ್ಲ. ಒಂದು ವೇಳೆ ಭೇಟಿ ಮಾಡಿ, ಮಾತಾಡಿದ್ದರೂ ಅದರಲ್ಲಿ ತಪ್ಪೇನಿದೆ.
ಧೈರ್ಯವಾಗಿ ಎದುರು ನಿಂತು ಮಾತಾಡುವುದು ಮೆಚ್ಚುಗೆಯ ಸಂಗತಿ. ಹೇಡಿಗಳಂತೆ ಬೆನ್ನ ಹಿಂದೆ ನಿಂತು ಚೂರಿ ಹಾಕುವ ಮಂದಿ ಕಂಡರೆ ಮೈ ಉರಿಯುತ್ತದೆ ಎಂದರು.
ಲೋಕಾಯುಕ್ತ ವರದಿ ಯನ್ನು ಲೀಕ್ ಮಾಡಿ ಸರ್ಕಾರಕ್ಕೆ ಮತ್ತು ಲೋಕಾಯುಕ್ತರಿಗೆ ಮುಜುಗರವನ್ನು ಉಂಟು ಮಾಡಿದ ವ್ಯಕ್ತಿಗಳ ಹೆಸರನ್ನು ಸದ್ಯದಲ್ಲಿಯೇ ಬಹಿರಂಗ ಪಡಿಸುತ್ತೇನೆ ಎಂದರು.












Click it and Unblock the Notifications