ಹಂಪಿ ವಿರೂಪಾಕ್ಷೇಶ್ವರನಿಗೆ ಅಡ್ಡಬಿದ್ದ ಯಡಿಯೂರಪ್ಪ
ಸಂಕಷ್ಟಗಳು ಎದುರಾದಾಗ ಅಥವಾ ಯಾವುದೇ ಮಹತ್ತರ ಕಾರ್ಯ ಕೈಗೊಳ್ಳುವ ಮುಂಚೆ ಯಡಿಯೂರಪ್ಪನವರು ತಮಗಿಷ್ಟವಾದ ದೇವರ ಪಾದಕ್ಕೆರಗುವುದು ಅನೇಕ ವರ್ಷಗಳಿಂದ ನಡೆದುಕೊಂಡುಬಂದಿರುವ ರಿವಾಜು. ಈ ಬಾರಿ ಅವರು ಬಳ್ಳಾರಿ ಜಿಲ್ಲೆಯ ವಿರೂಪಾಕ್ಷೇಶ್ವರನ ಮುಂದೆ ಕೈಯೊಡ್ಡಿ ನಿಂತಿದ್ದಾರೆ.
ಮಂಗಳವಾರ ಬೆಳಿಗ್ಗೆ 10.40ಕ್ಕೆ ವಿಶೇಷ ಹೆಲಿಕಾಪ್ಟರ್ ಮುಖಾಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿರುವ ಹೆಲಿಪ್ಯಾಡ್ ಗೆ ಬಂದಿಳಿದ ಯಡಿಯೂರಪ್ಪ ನೇರವಾಗಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅವರೊಂದಿಗೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ಜೊತೆಗೂಡಿದ್ದಾರೆ.
ಅಲ್ಲಿಂದ ಅವರೊಂದಿಗೆ ಬೆಂಗಳೂರಿನಿಂದಲೇ ಜೊತೆಗೂಡಿದ್ದ ಬಿಕೆ ಜೈನ್ ಎಂಬುವವರ ಜೊತೆ ಸೇರಿ ರತ್ನಕೂಟದಲ್ಲಿರುವ ಜೈನ ಮಂದಿರಕ್ಕೆ ತೆರಳಿ ಯಡಿಯೂರಪ್ಪನವರು ಕೆಲ ಕಾಲ ಧ್ಯಾನ ಮಾಡಿದರೆಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಸಂಪುಟದಲ್ಲಿ ವಾಲ್ಮಿಕಿ ಜನಾಂಗಕ್ಕೆ ಸೇರಿದ ಶ್ರೀರಾಮುಲು ಅವರನ್ನು ಸೇರಿಸಿಕೊಳ್ಳಬೇಕೆಂದು ಭಾರೀ ಲಾಬಿ ನಡೆಯುತ್ತಿದೆ. ವಾಲ್ಮಿಕಿ ಜಯಂತಿಯಂದೇ ಯಡಿಯೂರಪ್ಪನವರು ಬಳ್ಳಾರಿ ಜಿಲ್ಲೆಗೆ ಪ್ರವಾಸ ಕೈಗೊಂಡಿರುವುದು ಅನೇಕರ ಕುತೂಹಲಕ್ಕೆ ಕಾರಣವಾಗಿದೆ.