ಕಸಬ್ ಗಲ್ಲು: ಸುಪ್ರೀಂ ತಡೆಯಾಜ್ಞೆ ತಾತ್ಕಾಲಿಕ ಅಷ್ಟೆ
ಏಕೆಂದರೆ ಮರಣದಂಡನೆಗೆ ತಡೆಯಾಜ್ಞೆ ವಿಧಿಸುವ ವೇಳೆ ಸುಪ್ರೀಂ ಕೋರ್ಟೇ ಹೇಳಿರುವಂತೆ 'ದೇಶದ ಕಾನೂನು ಪರಮೋಚ್ಚವಾದುದರಿಂದ ಮತ್ತು ಸೂಕ್ತ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕಾಗಿರುವುದರಿಂದ ತಾನು ವಿಷಯವನ್ನು ಸಮಗ್ರವಾಗಿ ವಿಚಾರಣೆ ನಡೆಸಬಯಸಿದ್ದೇವೆ. ಆದ್ದರಿಂದ ಇನ್ನೂ ಒಂದೆರಡು ತಿಂಗಳು ಕಳೆಯಲಿ. ಆಮೇಲೆ ಅಂತಿಮ ತೀರ್ಪು ನೀಡುವುದಾಗಿ' ಕೋರ್ಟ್ ಹೇಳಿದೆ.
ಮುಂಬೈ ಮೇಲಣ ದಾಳಿಯಲ್ಲಿ ಬದುಕುಳಿದಿರುವ ಏಕೈಕ ಉಗ್ರನ ಮನವಿಯನ್ನು ಸಾರಾಸಗಟು ತಿರಸ್ಕರಿಸಬೇಕು ಮತ್ತು ಅದರ ವಿಚಾರಣೆ ನಡೆಸಲೇಬಾರದೆಂದು ದೇಶದ ಅನೇಕ ಮಂದಿಯ ಅಭಿಪ್ರಾಯವಾಗಿದೆಯೆಂದು ಕೂಡ ಜಸ್ಟಿಸ್ ಅಫ್ತಾಬ್ ಆಲಂ ಮತ್ತು ಜಸ್ಟಿಸ್ ಸಿ.ಕೆ. ಪ್ರಸಾದ್ ಅವರನ್ನೊಳಗೊಂಡ ವಿಶೇಷ ಪೀಠ ಹೇಳಿರುವುದು ಗಮನಾರ್ಹ.
2008ರ ಉಗ್ರಗಾಮಿ ದಾಳಿ ಪ್ರಕರಣವನ್ನು ಕೈಗೆತ್ತಿಕೊಂಡಿರುವುದಕ್ಕಾಗಿ ಮತ್ತು ಕೋರ್ಟ್ಗೆ ನೆರವಾಗಲು ಒಪ್ಪಿರುವುದಕ್ಕಾಗಿ ಹಿರಿಯ ವಕೀಲ ಮತ್ತು ಸ್ವತಂತ್ರ ಸಲಹೆಗಾರ ರಾಜು ರಾಮಚಂದ್ರನ್ ಅವರನ್ನು ಪೀಠ ಅಭಿನಂದಿಸಿತು.
ಪ್ರಸ್ತುತ, ಮುಂಬಯಿಯ ಆರ್ಥರ್ ರೋಡ್ ಜೈಲಿನಲ್ಲಿರುವ ಕಸಬ್ ತನಗೆ ವಿಧಿಸಲಾಗಿರುವ ಶಿಕ್ಷೆ ವಿರುದ್ಧ ಜೈಲು ಅಧಿಕಾರಿಗಳ ಮೂಲಕ ವಿಶೇಷ ಮೇಲ್ಮನವಿ ಸಲ್ಲಿಸಿದ್ದಾನೆ. ವಿಶೇಷ ಕೋರ್ಟ್ ಕಳೆದ ವರ್ಷ ಮೇ 6ರಂದು ಆತನಿಗೆ ಮರಣದಂಡನೆ ವಿಧಿಸಿತ್ತು. ಬಾಂಬೆ ಹೈಕೋರ್ಟ್ ಕಳೆದ ಫೆ. 21ರಂದು ಶಿಕ್ಷೆಯನ್ನು ಎತ್ತಿಹಿಡಿದಿದೆ.