ಅಡಗಿರುವ ರೆಡ್ಡಿ ಆಪ್ತ ಅಲಿಖಾನ್ ಹುಡುಕಿಕೊಡಿ

ಬಳ್ಳಾರಿಯ ಗಣಿ ಉದ್ಯಮಿಗಳ ಬಳಗದಲ್ಲಿ ಅಲಿಖಾನ್ ಅಲಿಯಾಸ್ ಅಲಿ ಅಲಿಯಾಸ್ ಖಾನ್ ಎಂದೇ ಖ್ಯಾತನಾಗಿರುವ ಈತನು, ಸೆಪ್ಟಂಬರ್ 5ರಂದು ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಮತ್ತು ಓಎಂಸಿಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ ರೆಡ್ಡಿ ಅವರನ್ನು ಬಳ್ಳಾರಿಯ ಅವರ ಮನೆಗಳಲ್ಲಿ ನಸುಕಿನಲ್ಲೇ ಬಂಧಿಸಿದ ದಿನದಿಂದಲೂ ನಾಪತ್ತೆ.
ಆಂಧ್ರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳಿಸಿರುವ ನೋಟೀಸಿನಲ್ಲಿ 'ಜನಾರ್ದನ ರೆಡ್ಡಿಯ ಆಪ್ತ ಸಹಾಯಕ ಅಲಿಖಾನ್ಗಾಗಿ ಹುಡುಕಾಟ ನಡೆದಿದೆ. ಈತನು ಗಣಿ ಹಗರಣದ ಪ್ರಮುಖ ಆರೋಪಿ. ಇಡೀ ಪ್ರಕರದಲ್ಲಿ ಎರಡನೇ ಪ್ರಮುಖ ವ್ಯಕ್ತಿ. ಈತನು ವಿದೇಶಕ್ಕೆ ಪರಾರಿ ಆಗಿದ್ದಾನೆ ಎಂದು ಪ್ರಾರಂಭದಲ್ಲಿ ಶಂಕಿಸಲಾಗಿತ್ತು. ದೇಶದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈತನಿಗಾಗಿ ಶೋಧ ನಡೆಸಲಾಯಿತು. ಅಲಿಖಾನ್ ದೇಶದಲ್ಲೇ ಅಡಗಿದ್ದಾನೆ. ಹುಡುಕಿಕೊಡಿ" ಎಂದು ಸಿಬಿಐ ತಿಳಿಸಿದೆ.
ಅಲಿಖಾನ್ನ ಪತ್ನಿ ಸರ್ಕಾರಿ ವೈದ್ಯೆ. ಆರೋಗ್ಯ ಇಲಾಖೆಯ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಆಸ್ಪತ್ರೆಯಲ್ಲಿ ಕರ್ತವ್ಯನಿರತೆ. ಅಲಿಖಾನ್ನ ಹೆಂಡತಿಯ ತಂದೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್, ದೊಡ್ಡ ಹುದ್ದೆ. ಶಿಸ್ತುಬದ್ಧ, ಸಂಪ್ರದಾಯಸ್ಥ ಕುಟುಂಬ. ಜನಾರ್ದನ ರೆಡ್ಡಿಯ ಮಧ್ಯಸ್ಥಿಕೆಯಲ್ಲಿ ಒಲ್ಲದ ಮನಸ್ಸಿನಿಂದ ತಮ್ಮ ಮಗಳನ್ನು ಅಲಿಖಾನ್ಗೆ 8 ತಿಂಗಳ ಹಿಂದೆ ಧಾರೆಎರೆದುಕೊಟ್ಟಿದ್ದರು.
ಹೆಂಡತಿ, ಅತ್ತೆ - ಮಾವ ಮತ್ತು ಮೈದುನರು, ಗುಂತಕಲ್ಲುನಲ್ಲಿರುವ ತನ್ನ ಹೆತ್ತವರು ಮತ್ತು ವಿವಿಧೆಡೆ ಇರುವ ಸಂಬಂಧಿಕರ ಜೊತೆ ಅಲಿಖಾನ್ ನಿತ್ಯ ನಿರಂತರ ಸಂಪರ್ಕದಲ್ಲಿದ್ದಾನೆ ಎಂದು ಸಿಬಿಐ ಹಾಗೂ ಪೊಲೀಸರು ಶಂಕಿಸಿದ್ದಾರೆ. ಈ ನಿಟ್ಟಿನಲ್ಲಿ ಅಲಿಖಾನ್ಗಾಗಿ ಹುಡುಕಾಟ ತೀವ್ರಗೊಂಡಿದೆ.
ಕರ್ನಾಟಕದ ಲೋಕಾಯುಕ್ತರಾಗಿದ್ದ ಸಂತೋಷ ಹೆಗಡೆ ಅವರು ಸರ್ಕಾರಕ್ಕೆ ಸಲ್ಲಿಸಿರುವ ಗಣಿ ಹಗರಣ ವರದಿಯಲ್ಲಿ ಆರ್.ಕೆ. ಮೈನಿಂಗ್ ಮತ್ತು ದೇವಿ ಎಂಟರ್ಪ್ರೈಸಸ್ನ ಬೇನಾಮಿ ವ್ಯವಹಾರಗಳ ಕೇಂದ್ರಬಿಂದು ಅಲಿಖಾನ್ ಮತ್ತು ಜನಾರ್ದನ ರೆಡ್ಡಿ ಎಂದು ನಮೂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಎಂಸಿ ಮತ್ತು ಡಿಎಂಎಸ್ ಮೈನಿಂಗ್ನ ಸಿಬಿಐ ತನಿಖೆಗೂ ಈತನ ಅಗತ್ಯವಿದೆ.












Click it and Unblock the Notifications