ಬೇಲೆಕೇರಿ ಅಧಿಕಾರಿಗಳಿಗೆ ಸಿಕ್ಕ ಲಂಚವೆಷ್ಟು?
ಆದರೆ ವಿವಿ ಲಕ್ಷ್ಮಿ ನಾರಾಯಣ ನೇತೃತ್ವದ ಸಿಬಿಐ ತಂಡ, ಲೋಕಾಯುಕ್ತ ವರದಿಯನ್ನು ಪರಿಶೀಲಿಸಿದ ಸುದ್ದಿ ಬಂದಿಲ್ಲ. ಸಿಇಸಿ ವರದಿಯನ್ನು ಮಾತ್ರ ಪರಿಗಣಿಸಿದೆ. ಎಎಫ್ಎಸ್ ಅಧಿಕಾರಿ ಯುವಿ ಸಿಂಗ್ ಅವರು ನೀಡಿದ ವರದಿ ಪ್ರಕಾರ ಬೇಲೇಕೆರಿಯಲ್ಲಿ ಹಣ ನುಂಗುವ ತಿಮಿಂಗಲದಂಥ ಅಧಿಕಾರಿಗಳ ಸ್ಥೂಲ ಚಿತ್ರಣ ಇಲ್ಲಿದೆ.
ಕಾರವಾರ ಮತ್ತು ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಿಸುವ ಅಕ್ರಮ ವ್ಯವಹಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಡಾ. ಯುವಿ ಸಿಂಗ್ ಸಮಿತಿಯ ವರದಿಯನ್ನಾಧರಿಸಿ ಲೋಕಾಯುಕ್ತ ಪೊಲೀಸರು 2010ರ ಫೆಬ್ರವರಿಯಲ್ಲಿ ಬೇಲೇಕೇರಿ ಬಂದರಿನ ಮೇಲೆ ಹಠಾತ್ ದಾಳಿ ನಡೆಸಿದ್ದರು.
ಭ್ರಷ್ಟರ ವ್ಯವಸ್ಥಿತ ಜಾಲ ಬಯಲು: ಆಗ ಅಲ್ಲಿ ವಶಪಡಿಸಿಕೊಂಡ ಕಂಪ್ಯೂಟರ್ ಮತ್ತಿತ್ತರ ದಾಖಲೆಗಳು ರೆಡ್ಡಿಗಳ ಅಕ್ರಮ ಅದಿರು ಸಾಗಾಟದ ಕಥೆಯನ್ನು ಹೊರಗೆಡಹಿವೆ. ಅಕ್ರಮ ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಬಂದರಿನ ಅಧಿಕಾರಿಗಳಿಗೆ, ಕಸಮ್ಸ್ ಅಧಿಕಾರಿಗಳಿಗೆ, ಪೊಲೀಸರಿಗೆ, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಗೆ, ಶಾಸಕ ಮತ್ತು ಸಂಸದರಿಗೂ ಸಹ ಲಂಚ ನೀಡುತ್ತಿದ್ದುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿವಿಧ ಹಂತದ ಅಧಿಕಾರಿಗಳಿಗೆ ವಿವಿಧ ಲಂಚದ ದರ ನಿರ್ಧರಿಸಿದುದನ್ನೂ ವರದಿಯಲ್ಲಿ ಹೇಳಲಾಗಿದೆ. ಬಂದರಿನ ಅಧಿಕಾರಿಗಳಿಗೆ ನಿಗದಿತ ಲಂಚ ಹಣವನ್ನು ನೀಡಲಾಗುತ್ತಿದು, ಕಸಮ್ಸ್ ಅಧಿಕಾರಿಗಳಿಗೆ ರಫ್ತು ಮಾಡಲಾದ ಅದಿರಿನ ಪ್ರಮಾಣದ ಮೇಲೆ ನೀಡಲಾಗುತ್ತಿತ್ತು.
2006ಕ್ಕೂ ಮುಂಚೆ ಒಂದು ಹಡಗಿಗೆ 12 ಸಾವಿರ ರೂ ಲಂಚ ನೀಡಲಾಗುತ್ತಿತ್ತು. 2006 ರಿಂದ 2008 ರವರೆಗೆ 60,000 ರೂ ನೀಡಲಾಗುತ್ತಿತ್ತು. ತದನಂತರ ಮೂರು ತಿಂಗಳಿಗೊಮ್ಮೆ ಒಂದು ಲಕ್ಷ ರೂ ನೀಡಲಾಗುತ್ತಿತ್ತು. ನಂತರ ಯಡಿಯೂರಪ್ಪ ಸರ್ಕಾರ ರಫ್ತು ನಿಷೇಧ ಹೇರಿತು.
ಬೇಲೇಕೇರಿ ಬಂದಿರಿನಿಂದ ರೆಡ್ಡಿಗಳ ವ್ಯವಹಾರ ಆಂಧ್ರಪ್ರದೇಶದ ಕೃಷ್ಣಪಟ್ನಂ ಕಡೆಗೆ ಸಾಗಿತು. ಆದರೂ, ಬೇಲೇಕೇರಿ ಹಿರಿಯ ಅಧಿಕಾರಿಗಳಿಗೆ ದಾಖಲೆಗಳನ್ನು ದಫನ್ ಮಾಡಲು ಲಂಚದ ಮೊತ್ತ ಸಂದಾಯವಾಗುತ್ತಿತ್ತು.
ಪೊಲೀಸ್ ಎಸ್ಪಿಗೆ ಎರಡು ತಿಂಗಳಿಗೊಮ್ಮೆ ಒಂದು ಲಕ್ಷ ರೂ, ಹೆಚ್ಚುವರಿ ಎಸ್ಪಿಗೆ ಮಾಹೆಯಾನ 25 ಸಾವಿರ, ಡೆಪ್ಯುಟಿ ಎಸ್ಪಿಗೆ ತಿಂಗಳಿಗೆ ಹತ್ತು ಸಾವಿರ ರೂ, ಪೊಲೀಸ್ ಇನ್ಸ್ಪೆಕ್ಟರ್ಗೆ ತಿಂಗಳಿಗೆ 14 ಸಾವಿರ ರೂ, ಪೊಲೀಸ್ ಔಟ್ಪೋಸ್ಟ್ಗಳಿಗೆ ತಿಂಗಳಿಗೆ ಎರಡು ಸಾವಿರ ರೂ, ಹೀಗೆ ವೇತನದ ಮಾದರಿಯಲ್ಲಿ ಲಂಚ ನೀಡಲಾಗುತ್ತಿತ್ತು.