ಕೇರಳ:ಮೂರು ಮಕ್ಕಳನ್ನು ಹೆತ್ತವರಿಗೆ ಜೈಲು ಶಿಕ್ಷೆ
ನ್ಯಾ.ವಿ.ಆರ್.ಕೃಷ್ಣ ಅಯ್ಯರ್ ನೇತೃತ್ವದ ಆಯೋಗ ಹಲವು ಕಠಿಣ ಕ್ರಮಗಳನ್ನು ಶಿಫಾರಸ್ಸು ಮಾಡಿದೆ. ಈ ಪೈಕಿ ಮೂರನೇ ಮಗುವನ್ನು ಹೊಂದುವ ತಂದೆ ತಾಯಿಗೆ ಜೈಲು ಶಿಕ್ಷೆ ಮತ್ತು ಸರ್ಕಾರಿ ಸೌಲಭ್ಯ ಮಾನ್ಯತೆಯನ್ನು ರದ್ದುಗೊಳಿಸುವುದು ಮುಂತಾದ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಚಿಂತಿಸಿದೆ.
ಮೂರನೇ ಮಗುವನ್ನು ಹುಟ್ಟಿಸಿದ ತಂದೆಗೆ ಹೆಂಡತಿ ಗರ್ಭಿಣಿಯಾಗಿರುವಾಗಲೇ ಮೂರು ತಿಂಗಳ ಕಾರಾಗೃಹ ವಾಸ ಮತ್ತು 10 ಸಾವಿರ ರೂ.ಗಿಂತ ಹೆಚ್ಚಿ ಜುಲ್ಮಾನೆಯನ್ನು ವಿಧಿಸಬೇಕು ಹಾಗೂ ಈ ದಂಪತಿಯನ್ನು ಕಾನೂನು ಪ್ರಕಾರ ಎಲ್ಲಾ ಯೋಜನೆಗಳು, ಸೌಲಭ್ಯಗಳಿಗೆ ಅನರ್ಹರು ಎಂದು ಪರಿಗಣಿಸಬೇಕೆಂದು 12 ಸದಸ್ಯರ ಈ ಆಯೋಗ ಸಲಹೆ ನೀಡಿದೆ.
ಜನನ ನಿಯಂತ್ರಣ ಮಾಡಲು ಬುದ್ಧಿವಂತರ ರಾಜ್ಯ ಕೇರಳದಲ್ಲಿ ಈ ರೀತಿಯ ಕಾನೂನು ಜಾರಿಗೆ ಮುಂದಾಗಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಅಲ್ಪಸಂಖ್ಯಾತರು, ಮುಸ್ಲಿಂ ಲೀಗ್, ಕೆಲ ಹೆಸರಾಂತ ನಟರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕ್ರೈಸ್ತರ ಪ್ರಬಲ ವಿರೋಧ:ಈ ಕಾಯಿದೆ ಪೋಷಕರ ಹಕ್ಕು ಕಿತ್ತುಕೊಂಡಂತೆ. ಧಾರ್ಮಿಕ ಸಂಘಟನೆಗಳು ಫ್ಯಾಮಿಲಿ ಪ್ಲ್ಯಾನಿಂಗ್ ವಿಷಯದಲ್ಲಿ ಮೂಗು ತೂರಿಸಬಾರದು ಎಂಬುದು ಪ್ರಜಾಪ್ರಭುತ್ವ ವಿರೋಧಿ ಎಂದು ಕ್ಯಾಥೋಲಿಕ್ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.
ಆದರೆ, ಕಾಂಗ್ರೆಸ್ ಸರ್ಕಾರ ಇರುವ ತನಕ ಅಲ್ಪಸಂಖ್ಯಾತರು ಹಾಗೂ ಧಾರ್ಮಿಕ ಹಕ್ಕುಗಳಿಗೆ ತೊಂದರೆಯಾಗುವುದಿಲ್ಲ. ಈ ಕಾಯಿದೆ ಚರ್ಚೆಗಷ್ಟೇ ಸೀಮಿತವಾಗಲಿದೆ. ಅಸೆಂಬ್ಲಿಯಲ್ಲಿ ಅಂಗೀಕಾರ ಆಗುವುದಕ್ಕೆ ಬಿಡುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಮುನೀರ್ ಭರವಸೆ ನೀಡಿದ್ದಾರೆ.