ಕುಡುಕ ಆಟೋ ಚಾಲಕನನ್ನು ತಮ್ಮನೇ ಇರಿದು ಕೊಂದ

ನಂಜನಗೂಡು ಪಟ್ಟಣದ ಅಶೋಕಪುರಂನ ನಿವಾಸಿ ಆಟೋ ಚಾಲಕ ಮಂಜುನಾಥ್ ಎಂಬಾತನೇ ತಮ್ಮನಿಂದ ಹತ್ಯೆಗೀಡಾದ ದುರ್ದೈವಿ. ಪಟ್ಟಣದಲ್ಲಿ ಮಂಜುನಾಥ ಆಟೋ ಓಡಿಸಿ ಸಂಪಾದಿಸುತ್ತಿದ್ದನಾದರೂ ಸಂಜೆಯಾಗುತ್ತಿದ್ದಂತೆ ಕಂಠಮಟ್ಟ ಕುಡಿದು ಮನೆಗೆ ತೆರಳಿ ತಮ್ಮ ರೇಣುಕುಮಾರನೊಂದಿಗೆ ಜಗಳಕ್ಕಿಳಿಯುತ್ತಿದ್ದನು.
ಅಣ್ಣ ಮಂಜುನಾಥನ ಈ ರೀತಿಯ ವರ್ತನೆಯಿಂದ ತಮ್ಮ ರೇಣುಕುಮಾರ ಬೇಸತ್ತು ಹೋಗಿದ್ದ. ಮನೆಯ ಜವಾಬ್ದಾರಿಯನ್ನು ಕಡೆಗಣಿಸಿ ಕುಡಿಯುವುದರಲ್ಲಿಯೇ ಕಾಲ ಕಳೆಯುತ್ತಿದ್ದ ಮಂಜುನಾಥನಿಗೆ ಮನೆಯವರು ಬುದ್ದಿ ಹೇಳಿ ಸರಿ ದಾರಿಗೆ ತರುವ ಪ್ರಯತ್ನ ಮಾಡಿದ್ದರಾದರೂ ಅದು ಪ್ರಯೋಜನವಾಗಲಿಲ್ಲ. ನಿನ್ನೆ ರಾತ್ರಿ ಕೂಡ ಮಂಜುನಾಥನ ವರ್ತನೆಯಿಂದ ಮನೆಯಲ್ಲಿ ಜಗಳವಾಗಿದೆ. ಇದರಿಂದ ರೋಷಗೊಂಡ ರೇಣುಕುಮಾರ ಅಣ್ಣ ಮಂಜುನಾಥನಿಗೊಂದು ಬುದ್ದಿಕಲಿಸುವ ನಿರ್ಧಾರಕ್ಕೆ ಬಂದಿದ್ದಾನೆ.
ಬುಧವಾರ ಬೆಳಿಗ್ಗೆ ಎಂದಿನಂತೆ ಮಂಜುನಾಥ ಆಟೋ ಓಡಿಸಲೆಂದು ಪಟ್ಟಣಕ್ಕೆ ಬಂದಿದ್ದಾನೆ. ಆತನನ್ನು ಹಿಂಬಾಲಿಸಿ ಬಂದ ತಮ್ಮ ರೇಣುಕುಮಾರ ಪಟ್ಟಣದ ಸಮೀಪವಿರುವ ನಾಲೆಯ ಏರಿ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ವಿಷಯ ತಿಳಿದ ಪೊಲೀಸರು ಆರೋಪಿ ರೇಣುಕುಮಾರನನ್ನು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.












Click it and Unblock the Notifications