ದಲಿತ ನಾಯಕನ ಪುಣ್ಯತಿಥಿ, ಗೋಲಿಬಾರ್: 5 ಸಾವು
ದಲಿತ ನಾಯಕ ಇಮ್ಯಾನುವೆಲ್ ಸೇಕರನ್ರ 54ನೆ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಲು ಪರಮಕುಡಿಗೆ ಆಗಮಿಸುತ್ತಿದ್ದ ಪಾಂಡಿಯನ್ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅವರ ಬಂಧನದ ವಿರೋಧಿಸಿ ಕೂಡಲೇ ಬೀದಿಗಿಳಿದ ಜನ ರಸ್ತೆ ತಡೆ ನಡೆಸಿದರು.
ಪೋಲೀಸರ ಜೊತೆ ವಾಗ್ವಾದದ ನಂತರ ಪ್ರತಿಭಟನಾ ನಿರತರು ಪೊಲೀಸರತ್ತ ಕಲ್ಲು ತೂರಾಟ ಆರಂಭಿಸಿದಾಗ ರಾಮನಾಥಪುರಂನ ಡಿಐಜಿ ಸಂದೀಪ್ ಮಿತ್ತಲ್ ಹಾಗೂ ಪೊಲೀಸ್ ಉಪಾಯುಕ್ತ ಕೆ.ಎ.ಸೆಂಥಿಲ್ವೇಲನ್ ಸಹಿತ ಹಲವರು ಗಾಯಗೊಂಡರು. ಆಗ ಪೊಲೀಸರು ಗೋಲಿಬಾರ್ ನಡೆಸಬೇಕಾಯಿತು.
ಗೋಲಿಬಾರ್ ನಿಂದಾಗಿ ಐವರು ಸಾವನ್ನಪ್ಪಿದ್ದಾರೆಂದು ಪೊಲೀಸರು ದೃಢಪಡಿಸಿದ್ದಾರೆ. ಗೋಲಿಬಾರ್ ಹಾಗೂ ಸಾವಿನ ಸುದ್ದಿ ಹರಡುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು 25,000 ದಲಿತರು ಸ್ಥಳಕ್ಕಾಗಮಿಸಿದಾಗ ಅಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.
ಪೊಲೀಸರು ಇಡೀ ಜಿಲ್ಲೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಪ್ರವೇಶ ಮಾರ್ಗಗಳಲ್ಲಿ ವಾಹನಗಳನ್ನು ತಡೆದು ಹಿಂಸಾಚಾರ ಹೆಚ್ಚಾಗುವುದನ್ನು ತಡೆಯಲು ಯತ್ನಿಸಿದರು. ರಾಜ್ಯದ ಬನಾನಾ ಭಾಗಗಳಿಂದ ದಲಿತರನ್ನು ಹೊತ್ತು ತಂದಿದ್ದ 5 ಸಾವಿರದಷ್ಟು ವಾಹನಗಳು ಜಿಲ್ಲೆಯ ಹೊರ ಭಾಗದಲ್ಲಿ ಸಾಲುಗಟ್ಟಿದ್ದವು.
ಒಂದು ಪೊಲೀಸ್ ವಾಹನ ಹಾಗೂ ಬಸ್ಸುಗಳು ಸೇರಿದಂತೆ ಒಟ್ಟು 15 ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳು ಪ್ರತಿಭಟನಾಕಾರರ ವಶದಲ್ಲಿದ್ದು ಪೊಲೀಸರು ಇದುವರೆಗೂ ಗಲಭೆ ನಿಯಂತ್ರಣಕ್ಕೆ ತರುವಲ್ಲಿ ವಿಫಲರಾಗಿದ್ದಾರೆ.