ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆ ಇಲ್ಲ : ಸದಾನಂದ ಗೌಡ

ಲೋಕಾಯುಕ್ತ ಪೊಲೀಸರು ಈಗಾಗಲೇ ಈ ಬಗ್ಗೆ ತನಿಖೆ ನಡೆಸಿದ್ದಾರೆ. ಎರಡನೇ ವರದಿ ಸರ್ಕಾರದ ಮುಂದಿದೆ. ವರದಿ ಬಗ್ಗೆ ಚರ್ಚೆ ನಡೆಸುವುದನ್ನು ಬಿಟ್ಟು ಸಿಬಿಐಗೆ ತನಿಖೆ ವಹಿಸುವುದು ತರವಲ್ಲ ಎಂದು ಸದಾನಂದ ಗೌಡ ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಬಳ್ಳಾರಿಯ ಜನಾರ್ದನ ರೆಡ್ಡಿ ಅವರು ನಡೆಸಿದ ಅಕ್ರಮ ಗಣಿಗಾರಿಕೆಯ ಫಲವಾಗಿ ಸಿಬಿಐಯಿಂದ ಬಂಧನಕ್ಕೀಡಾದ ಮೇಲೆ, ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ರಾಜ್ಯದಲ್ಲೂ ಗಣಿಗಾರಿಕೆ ಮೇಲೆ ಸಿಬಿಐ ತನಿಖೆ ನಡೆಯಲಿ ಎಂದು ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸಹ ಆಗ್ರಹಿಸಿದ್ದಾರೆ. ಲೋಕಾಯುಕ್ತ ಶಿವರಾಜ್ ಪಾಟೀಲ್ ಅವರು ಸಿಬಿಐಗೆ ಅಗತ್ಯ ದಾಖಲೆ ಒದಗಿಸುವುದಾಗಿ ಹೇಳಿದ್ದಾರೆ.
ಆದರೆ, ರೆಡ್ಡಿ ಬಂಧನವನ್ನು ಕಾಂಗ್ರೆಸ್ ಕುತಂತ್ರ ಎಂದೇ ಭಾವಿಸಿ, ಸಿಬಿಐ ವಿರುದ್ಧ ಕರ್ನಾಟಕ ಬಿಜೆಪಿ ಹೇಳಿಕೆ ನೀಡುತ್ತಿದೆ. ಈಗ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ನೀಡುವ ಬಗ್ಗೆ ತನ್ನ ನಿಲುವನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೆಟ್ರೋ ಸಂಚಾರ ಉದ್ಘಾಟನೆ ಬಗ್ಗೆ ಹೆಚ್ಚಿನ ಚರ್ಚೆ ನಡೆಯಿತು ಎಂದು ಸಚಿವ ವಿಎಸ್ ಆಚಾರ್ಯ ಹೇಳಿದರು. ಉಳಿದಂತೆ 2007 ಭೂ ಕಬಳಿಕೆ ನಿಷೇಧ ವಿಧೇಯಕ (ತಿದ್ದುಪಡಿ) ಕಾಯ್ದೆ ಜಾರಿಗೆ ಚಿಂತನೆ ಹಾಗೂ ಭಾಗ್ಯಲಕ್ಷ್ಮಿ ಯೋಜನೆ ಬಿಪಿಎಲ್ ಕಡ್ಡಾಯ ಮಾಡುವುದರ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications