ರೆಡ್ಡಿ ಜೈಲು ಸೇರಿದ್ರು, ದೇವೇಗೌಡ್ರು ತುಟಿ ಬಿಚ್ಚಿಲ್ಲ ಏಕೆ?
ಎಚ್ ಡಿ ಕುಮಾರಸ್ವಾಮಿ ಕೋರ್ಟ್ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದ ದೊಡ್ಡ ಗೌಡ್ರು, ಲೋಕಾಯುಕ್ತ ಕೋರ್ಟ್ ಕೇಸ್ ಆಗಲಿ, ರೆಡ್ಡಿ ಬಗ್ಗೆ ಸಿಬಿಐ ಕೋರ್ಟ್ ಕೇಸ್ ಬಗ್ಗೆ ಆಗಲಿ ಏನನ್ನೂ ಹೇಳಿಲ್ಲ. ದೇವೇಗೌಡರ ಮೌನದ ಅರ್ಥ ಹುಡುಕಲು ಯಾರಿಗೂ ಇನ್ನೂ ಸಾಧ್ಯವಾಗಿಲ್ಲ.
ಮೊನ್ನೆ ಶ್ರೀರಾಮುಲು ರಾಜೀನಾಮೆ ಕೊಟ್ಟು ಜೆಡಿಎಸ್ ಸೇರುತ್ತಾರಂತೆ ಹೌದಾ? ಎಂದು ಪ್ರಶ್ನಿಸಿದಾಗ ಮಾತ್ರ ಅಂಥಾ ಬೆಳವಣಿಗೆ ಏನೂ ನಡೆದಿಲ್ಲ. ನನಗೇನೂ ಗೊತ್ತಿಲ್ಲ ಎಂದಷ್ಟೇ ಹೇಳಿದ್ದರು.
ಕೋರ್ಟ್ ಕೇಸ್, ಜೈಲು ವಾಸದ ಬಗ್ಗೆ ತಲೆಕೆಡಿಸಿಕೊಳ್ಳದ ಗೌಡ್ರು ಮತ್ತೆ ರಸ್ತೆ ಬಗ್ಗೆ ಹೋರಾಟಕ್ಕಿಳಿದಿದ್ದಾರೆ. ಫಾರ್ ಎ ಚೇಂಜ್ ನೈಸ್ ಬಿಟ್ಟು ಹಾಸನ ಬೆಂಗಳೂರು ಹೆದ್ದಾರಿ ಮೇಲೆ ಗೌಡ್ರ ಕಣ್ಣು ಬಿದ್ದಿದೆ.
ಎಲ್ಲಿದ್ದಾರೆ ಗೌಡರು? : ಹಾಸನ ಮತ್ತು ದಕ್ಷಿಣ ಕನ್ನಡದ ಬಿಸಿ ರೋಡ್ ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರ 130 ಕಿಮೀ ಅಂತರದ ರಸ್ತೆ ಶೀಘ್ರ ಅಭಿವೃದ್ಧಿಗೆ ದೇವೇಗೌಡರು ಒತ್ತಾಯಿಸಿದ್ದಾರೆ.
28 ಕಿಮೀ ಅಂತರದ ಶಿರಾಡಿ ಘಾಟ್ ಪ್ರದೇಶ ಒಳಗೊಂಡಿರುವ ಈ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯಾವತ್ತೋ ಕ್ಲಿಯರೆನ್ಸ್ ನೀಡಿದೆ ಎಂದ ಗೌಡ, ಈ ಪ್ರಸ್ತಾವವು 2006ರಿಂದಲೂ ನೆನೆಗುದಿಗೆ ಬಿದ್ದಿದೆ ಎಂದರು. ಕೇಂದ್ರದ ಅನುದಾನ ಪಡೆದು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಅಧಿಕಾರಿಗಳು ಏನು ಮಾಡುತ್ತಿಲ್ಲ ಎಂದು ಗುಡುಗಿದ್ದಾರೆ.
ಪ್ರತೀ ಕಿಮೀಗೆ 14 ಕೋಟಿ ರೂಪಾಯಿ ಬೇಕಾಗಿತ್ತು ಈಗ 125 ಕೋಟಿ ರೂಪಾಯಿ ಅಗತ್ಯವಿದೆ. ರಸ್ತೆ ಅಗಲೀಕರಣ, ಸುರಂಗ ಕೊರೆಯುವಿಕೆ, ಡಾಂಬರೀಕರಣ ಕಾರ್ಯ ಶೀಘ್ರದಲ್ಲಿ ಆಗದಿದ್ದರೆ ಹೋರಾಟಕ್ಕಿಳಿಯುವುದಾಗಿ ದೇವೇಗೌಡ್ರು ಎಚ್ಚರಿಸಿದ್ದಾರೆ. ರೆಡ್ಡಿಗಳ ಬಗ್ಗೆ ದೇವೇಗೌಡರ ಹೇಳಿಕೆ ಪಡೆಯಲು ಹೋದ ವರದಿಗಾರರಿಗೆ ರಸ್ತೆ ಅಭಿವೃದ್ಧಿ ಬಗ್ಗೆ ಗೌಡ್ರು ಪಾಠ ಮಾಡಿ ಕಲಿಸಿದ್ದಾರೆ.